ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಡಾಯ ಅಭ್ಯರ್ಥಿಗಳಿಂದ ಏನೂ ಎಫೆಕ್ಟ್‌ ಆಗಲ್ಲ...’

ಖಾನಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ
Last Updated 24 ಏಪ್ರಿಲ್ 2018, 6:24 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮರಾಠಿ ಪ್ರಭಾವ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಪ್ರಾಬಲ್ಯ ಹೊಂದಿದೆ. ಇದುವರೆಗೆ ನಡೆದ 13 ಚುನಾವಣೆಗಳಲ್ಲಿ 12 ಚುನಾವಣೆಗಳಲ್ಲಿ ಜಯಗಳಿಸಿದೆ. ಇಂತಹ ಎಂಇಎಸ್‌ ಭದ್ರಕೋಟೆ ಭೇದಿಸಲು ಮುಂಬೈನ ಸ್ತ್ರೀರೋಗ ತಜ್ಞೆ ಅಂಜಲಿ ನಿಂಬಾಳ್ಕರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಇವರ ಪತಿ, ಐಪಿಎಸ್‌ ಅಧಿಕಾರಿ ಹೇಮಂತ ನಿಂಬಾಳ್ಕರ ಮಹಾರಾಷ್ಟ್ರದ ಕೊಲ್ಹಾಪುರದವರು. ಇವರು ಬೆಳಗಾವಿಯಲ್ಲಿ ಎಸ್ಪಿಯಾಗಿದ್ದಾಗ ಅವರ ಜೊತೆ ಅಂಜಲಿ ಬಂದರು. ಬೆಳಗಾವಿಯಿಂದ ಕೇವಲ 35 ಕಿ.ಮೀ ದೂರ ಇರುವ ಖಾನಾಪುರ ಪಟ್ಟಣವನ್ನು ತಮ್ಮ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರು. ಅಂಜಲಿತಾಯಿ ಫೌಂಡೇಷನ್‌ ಕಟ್ಟಿಕೊಂಡು, ಪ್ರಾಥಮಿಕ ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ಒತ್ತು ನೀಡಿದರು.

ಅಂಜಲಿ ಅವರ ತವರು ಮನೆಯವರು ಮಹಾರಾಷ್ಟ್ರದಲ್ಲಿ ರಾಜಕೀಯದ ನಂಟುಹೊಂದಿದ್ದಾರೆ. ಇದೇ ನೆಂಟಸ್ತಿಕೆಯಿಂದ ಅಂಜಲಿ ಅವರು ಕೂಡ ರಾಜಕೀಯಕ್ಕೆ ಇಳಿದರು. ಕಳೆದ ಬಾರಿ 2013ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದರು. ಟಿಕೆಟ್‌ ಸಿಗದೇ ಇದ್ದಾಗ ಬಂಡಾಯವಾಗಿ ಸ್ಪರ್ಧಿಸಿದ್ದರು. ಈ ಸಲ ಅಂಜಲಿ ಅವರಿಗೆ ಟಿಕೆಟ್‌ ದೊರೆತಿದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆಲವರು ಪಕ್ಷ ತೊರೆದು, ಬೇರೆ ಪಕ್ಷದತ್ತ ವಲಸೆ ಹೋಗಿದ್ದಾರೆ. ಇನ್ನು ಕೆಲವರು ಬೇರೆ ಪಕ್ಷದವರಿಗೆ ಬೆಂಬಲ ನೀಡುತ್ತಿದ್ದಾರೆ. ಇದು ಅಂಜಲಿ ಅವರ ಸ್ಪರ್ಧೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೇ? ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ‘ಪ್ರಜಾವಾಣಿ’ ಸಂದರ್ಶನ ನಡೆಸಿತು;

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆಲವರು ಇತರ ಪಕ್ಷಗಳ ಅಭ್ಯರ್ಥಿಗಳ ಜೊತೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದು ನಿಮ್ಮ ಸ್ಪರ್ಧೆಯ ಮೇಲೆ ಪರಿಣಾಮ ಉಂಟು ಮಾಡುವುದಿಲ್ಲವೇ?

ಇಲ್ಲವೇ ಇಲ್ಲ. ಯಾರು ಎಷ್ಟೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೂ ಪಕ್ಷದ ಮತಗಳ ಮೇಲೆ ಪರಿಣಾಮ ಬೀರುವುದಿಲ್ಲ. ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ನಿಶ್ಚಿತ ಮತಗಳಿವೆ. ಇವು ನನಗೆ ಸಿಗಲಿವೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇನೆ. ಹಳ್ಳಿ ಹಳ್ಳಿಗೂ ಹೋಗಿ, ಜನರಿಗೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ನೀಡಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಇದು ನನಗೆ ಲಾಭ ತಂದುಕೊಡಲಿದೆ.

ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ? ಎಲ್ಲರ ಸಹಕಾರ ಸಿಗುತ್ತಿದೆಯೇ?

ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಹಳ್ಳಿ ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಮನೆ ಮನೆಗೆ ತೆರಳಿ ಮತದಾರರನ್ನು ಭೇಟಿಯಾಗುತ್ತಿದ್ದೇನೆ. ಪಕ್ಷದ ಎಲ್ಲ ಮುಖಂಡರು ನನ್ನ ಜೊತೆ ಬರುತ್ತಾರೆ. ಯಾರಿಂದಲೂ ವಿರೋಧ ಇಲ್ಲ. ಎಲ್ಲರ ಸಹಕಾರ ಸಿಗುತ್ತಿದೆ.

ಪ್ರಚಾರದ ಸಮಯದಲ್ಲಿ ನೀವು ನೋಡಿರುವಂತೆ ಕ್ಷೇತ್ರ ಹೇಗಿದೆ?

ಕ್ಷೇತ್ರದಲ್ಲಿ ಸರಿಯಾಗಿ ರಸ್ತೆಗಳಿಲ್ಲ. ಕುಡಿಯುವ ನೀರಿನ ಸೌಕರ್ಯವಿಲ್ಲ. ಇನ್ನು ಎಷ್ಟೋ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಲಭಿಸಿಲ್ಲ. ಜನರಿಗೆ ಬೇಕಾಗುವ ಮೂಲ ಸೌಕರ್ಯಗಳೇ ಇಲ್ಲಿಲ್ಲ. ಈ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಹಾಲಿ ಶಾಸಕರು ಪ್ರಯತ್ನಿಸಿಯೇ ಇಲ್ಲ.

ಕ್ಷೇತ್ರದಲ್ಲಿ ಮರಾಠಿ ಪ್ರಭಾವ ಇದೆ. ಭಾಷಾ ವಿಷಯವನ್ನೇ ಇಟ್ಟುಕೊಂಡು ಎಂಇಎಸ್‌ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನಿಮ್ಮ ತಂತ್ರವೇನು?

ರಾಜಕಾರಣದಲ್ಲಿ ಭಾಷಾ ವಿಷಯವನ್ನು ತರಬಾರದು. ಎಲ್ಲ ಭಾಷೆಗಳೂ ಒಂದೇ.

ನಿಮ್ಮ ಆದ್ಯತೆ ಏನು?

ಕ್ಷೇತ್ರದ ಹಳ್ಳಿ ಹಳ್ಳಿಗೂ ರಸ್ತೆ ಸಂಪರ್ಕ ಕಲ್ಪಿಸುತ್ತೇನೆ. ವಿದ್ಯುತ್‌ ಹಾಗೂ ಕುಡಿಯುವ ನೀರು ಸಂಪರ್ಕ ಕಲ್ಪಿಸುತ್ತೇನೆ. ಖಾನಾಪುರ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅರಣ್ಯವಾಸಿಗಳಿದ್ದಾರೆ. ಇವರಲ್ಲಿ ಬಹಳಷ್ಟು ಜನರಿಗೆ ಅರಣ್ಯ ಹಕ್ಕು ಸಿಕ್ಕಿಲ್ಲ. ಇದನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. ಇದಕ್ಕೂ ಮೊದಲು ನಾನು ಸ್ತ್ರೀರೋಗ ವೈದ್ಯೆಳಾಗಿದ್ದೆ. ಮನೆಯ ಹೆಣ್ಣುಮಕ್ಕಳ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದೆ. ಶಾಸಕಿಯಾಗಿ ಆಯ್ಕೆಯಾದರೆ, ಕುಟುಂಬದ ಎಲ್ಲ ಸದಸ್ಯರನ್ನು ಒಳಗೊಂಡಂತೆ ಸಮಾಜದ ಆರೋಗ್ಯವನ್ನು ಸುಧಾರಿಸಲು ಯತ್ನಿಸುತ್ತೇನೆ.

ಜನರು ನಿಮ್ಮನ್ನು ಏತಕ್ಕಾಗಿ ಆಯ್ಕೆ ಮಾಡಬೇಕು?

ಹಾಲಿ ಶಾಸಕರು ಈ ಪ್ರದೇಶವನ್ನು ಎಳ್ಳಷ್ಟೂ ಅಭಿವೃದ್ಧಿ ಮಾಡಿಲ್ಲ. ರಸ್ತೆ, ನೀರು, ವಿದ್ಯುತ್‌ ಸಮಸ್ಯೆ ಎಲ್ಲೆಡೆ ತಾಂಡವವಾಡುತ್ತಿದೆ. ಅಭಿವೃದ್ಧಿ ಎಂದರೆ ಏನು ಎನ್ನುವುದು ಇಲ್ಲಿಯವರೆಗೆ ಗೊತ್ತಿಲ್ಲ. ನನ್ನನ್ನು ಆಯ್ಕೆ ಮಾಡಿದರೆ, ಅಭಿವೃದ್ಧಿ ಹೇಗೆ ಇರುತ್ತದೆ ಎನ್ನುವುದನ್ನು ತೋರಿಸುತ್ತೇನೆ. ಈಗಾಗಲೇ ಫೌಂಡೇಷನ್‌ ಮೂಲಕ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಬ್ಯಾಗ್‌ ಹಾಗೂ ಇತರ ಸಲಕರಣೆಗಳನ್ನು ನೀಡುತ್ತಿದ್ದೇನೆ. ಶಾಲೆಗೆ ಹೋಗುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದೇನೆ. ಇದರ ಫಲವಾಗಿ ಇಂದು ಖಾನಾಪುರದಲ್ಲಿ ಶಾಲೆ ಬಿಟ್ಟವರ ಸಂಖ್ಯೆ ಇಳಿಮುಖವಾಗಿದೆ. ಫೌಂಡೇಷನ್‌ ಮೂಲಕ ಮಾಡಲಾಗುತ್ತಿರುವ ಕೆಲಸಗಳನ್ನು ಶಾಸಕಿಯಾದ ಮೇಲೆ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT