2023ರ ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ರಾವ್ ಯಾದವೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್, ಗುನಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವವಿದ್ದರೂ, ಜ್ಯೋತಿರಾದಿತ್ಯ ಅವರಂತಹ ಪ್ರಬಲ ಅಭ್ಯರ್ಥಿಯನ್ನು ಮಣಿಸಲು ಕಮಲ ಪಾಳಯದಿಂದ ಬಂದಿರುವ ಅಭ್ಯರ್ಥಿಯನ್ನೇ ಅಖಾಡಕ್ಕಿಳಿಸುವ ಮೂಲಕ ಕಣವನ್ನು ರಂಗೇರಿಸಿದೆ. ಯಾದವೇಂದ್ರ ಅವರ ತಂದೆ ದೇಶರಾಜ್ ಸಿಂಗ್ ಯಾದವ್ ಅವರು ಬಿಜೆಪಿಯಲ್ಲಿ ಶಾಸಕರಾಗಿದ್ದವರು. ಸದ್ಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಯಾದವೇಂದ್ರ ಅವರನ್ನು ಇಂತಹ ಪ್ರತಿಷ್ಠಿತ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿರುವುದರ ಹಿಂದಿನ ಲೆಕ್ಕಾಚಾರವೂ ಇದೇ ಆಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಂಗಾವಲಿ ಕ್ಷೇತ್ರದಿಂದ ಸ್ಪರ್ಧಿಸಿ ಇವರು ಸೋತಿದ್ದರು. ಈ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಜ್ಯೋತಿರಾದಿತ್ಯ ಅವರ ವಿರುದ್ಧ ದೇಶರಾಜ್ ಸಿಂಗ್ ಅವರು ಎರಡು ಬಾರಿ ಸೆಣಸಿ ಪರಾಭವಗೊಂಡಿದ್ದರು.