ನವದೆಹಲಿ: ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿ ಟೀಂ ಆಗಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಡ್ಯಾನಿಶ್ ಅಲಿ ಹೇಳಿದ್ದಾರೆ.
ಈ ಹಿಂದೆ ಬಿಎಸ್ಪಿಯಲ್ಲಿ ಸಂಸದರಾಗಿದ್ದ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಾರೆ. ಉತ್ತರಪ್ರದೇಶದ ಅಮ್ರೋಹ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದಾರೆ.
ಚುನಾವಣೆ ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ವಿರುದ್ಧ ಟೀಕೆ ಮಾಡಿರುವುದು ಅವರ ಹತಾಶೆಯನ್ನು ತೋರಿಸುತ್ತದೆ ಎಂದರು. ಕಳೆದ 5 ವರ್ಷಗಳಲ್ಲಿ ಸದನದಲ್ಲಿ ಆಡಳಿತ ಪಕ್ಷವನ್ನು ನಾನು ಹಲವು ಸಲ ಇಕ್ಕಟ್ಟಿಗೆ ಸಿಲುಕಿಸಿದ್ದೇನೆ. ಆದ್ದರಿಂದ ಬಿಜೆಪಿಯವರಿಗೆ ನಾನು ಸದನದ ಒಳಗೆ ಬರಲು ಇಷ್ಟವಿಲ್ಲ ಈ ಕಾರಣಕ್ಕೆ ಅವರು ಚುನಾವಣೆಯಲ್ಲಿ ನನ್ನ ವಿರುದ್ಧ ತಮ್ಮ ಸಂಪೂರ್ಣ ಶಕ್ತಿಯನ್ನು ವ್ಯಯಿಸುತ್ತಿದ್ದಾರೆ ಎಂದರು.
ಕಳೆದ ಎರಡು ವಾರಗಳಲ್ಲಿ ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ್) ಅಮ್ರೋಹಕ್ಕೆ ಎರಡು ಸಲ ಬಂದಿದ್ದಾರೆ. ಇಡೀ ಬಿಜೆಪಿಯ ನಾಯಕರು ಇಲ್ಲೇ ಇದ್ದಾರೆ. ಇದನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಡ್ಯಾನಿಶ್ ಅಲಿ ಹೇಳಿದರು.