ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ, ಮಣಿಪುರದ ಕೆಲವೆಡೆ ಗುಂಡಿನ ದಾಳಿ ಹಾಗೂ ಛತ್ತೀಸಗಢದಲ್ಲಿ ನೆಲಬಾಂಬ್ ಸ್ಫೋಟದಂತಹ ಘಟನೆಗಳ ನಡುವೆ ಶುಕ್ರವಾರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ಶೇ 60ಕ್ಕೂ ಅಧಿಕ ಪ್ರಮಾಣದ ಮತದಾನವಾಗಿದೆ.
ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಮತದಾರರು ತಮ್ಮ ಸಂವಿಧಾನ ದತ್ತ ಹಕ್ಕನ್ನು ಚಲಾಯಿಸಿದ್ದಾರೆ. ಶುಕ್ರವಾರ ಸಂಜೆ 7 ಗಂಟೆ ಹೊತ್ತಿಗೆ ಲಭ್ಯವಾಗಿರುವ ಮಾಹಿತಿಯಂತೆ, ಶೇ 60.03ರಷ್ಟು ಮತದಾನವಾಗಿದ್ದು, ಚಲಾವಣೆಯಾದ ಮತಗಳ ಕುರಿತು ಶನಿವಾರ ಅಂತಿಮ ಅಂಕಿ–ಅಂಶ ಸಿಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಗರಿಷ್ಠ ಶೇ 79.90ರಷ್ಟು ಮತದಾನ ತ್ರಿಪುರಾದಲ್ಲಿ ಆಗಿದ್ದರೆ, ಅತ್ಯಂತ ಕನಿಷ್ಠ ಶೇ 47.49ರಷ್ಟು ಮತದಾನ ಬಿಹಾರದಲ್ಲಿ ಆಗಿದೆ.
ಹಲವೆಡೆ ಮತದಾನ ಪ್ರಕ್ರಿಯೆ ಆರಂಭಗೊಂಡ ಕೆಲ ಹೊತ್ತಿನಲ್ಲಿಯೇ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ದೋಷ ಕಂಡುಬಂದ ಘಟನೆಗಳು ವರದಿಯಾಗಿವೆ. ಪಟ್ಟಿಯಲ್ಲಿ ತಮ್ಮ ಹೆಸರುಗಳು ಇಲ್ಲದಿರುವ ಬಗ್ಗೆಯೂ ಕೆಲವೆಡೆ ಮತದಾರರು ಆಕ್ಷೇಪ ವ್ಯಕ್ತಪಡಿಸಿದರು.
ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದರೂ, ಮತ ಚಲಾಯಿಸಲು ಜನರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗಾಗಿ, ಸರದಿಯಲ್ಲಿ ಇದ್ದವರಿಗೆಲ್ಲ ತಮ್ಮ ಹಕ್ಕು ಚಲಾವಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಆಯೋಗ ತಿಳಿಸಿದೆ.
ಮೊದಲ ಹಂತದಲ್ಲಿ ‘ಅಧಿಕ ಪ್ರಮಾಣ’ದ ಮತದಾನ ನಡೆದಿದೆ ಎಂದು ಆಯೋಗ ಹೇಳಿದೆ. 2019ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಶೇ 69.43ರಷ್ಟು ಮತದಾನವಾಗಿತ್ತು.
ಮತದಾನದ ಸುತ್ತ ಮುತ್ತ
* ಪೂರ್ವ ನಾಗಾಲ್ಯಾಂಡ್ನ ಆರು ಜಿಲ್ಲೆಗಳಲ್ಲಿ ಯಾರೊಬ್ಬರೂ ಮತ ಚಲಾಯಿಸಿಲ್ಲ.
* ಛತ್ತೀಸಗಢದ ಬಿಜಾಪುರ ಜಿಲ್ಲೆಯ ಬೈರಮಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರು ಇಟ್ಟಿದ್ದ ಕಚ್ಚಾಬಾಂಬ್ ಸ್ಫೋಟಗೊಂಡ ಪರಿಣಾಮ ಸಿಆರ್ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ; ಜಿಲ್ಲೆಯ ಗುಲ್ಗಾಂ ಗ್ರಾಮದ ಸಮೀಪ ಗ್ರೆನೇಡ್ ಲಾಂಚರ್ಗೆ ಸಿಡಿಮದ್ದು ತುಂಬುವ ಕೋಶವೊಂದು ಆಕಸ್ಮಿಕವಾಗಿ ಸ್ಫೋಟಿಸಿದ ಪರಿಣಾಮ ಸಿಆರ್ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ.
* ಪಶ್ಚಿಮ ಬಂಗಾಳದ ಮೂರು ಲೋಕಸಭಾ ಕ್ಷೇತ್ರದ ವಿವಿಧೆಡೆ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ
* ಇದೇ ಮೊದಲ ಬಾರಿಗೆ ಛತ್ತೀಸಗಢದ ಬಸ್ತರ್ ಜಿಲ್ಲೆಯ 56 ಗ್ರಾಮಗಳ ಜನರು ತಮ್ಮ ಗ್ರಾಮಗಳಲ್ಲಿಯೇ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದ್ದಾರೆ
* ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬುಡಕಟ್ಟು ಸಮುದಾಯಗಳ ಜನರು ಭಾರಿ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದಿದ್ದರು. ಗ್ರೇಟ್ ನಿಕೋಬಾರ್ನ ಶೊಂಪೇನ್ ಬುಡಕಟ್ಟು ಜನರು ಇದೇ ಮೊದಲ ಬಾರಿಗೆ ಮತ ಚಲಾವಣೆ ಮಾಡಿದ್ದು ವಿಶೇಷ
* ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮಾಲೋಗಾಮ್ ಎಂಬ ಹಳ್ಳಿಯಲ್ಲಿ ಸೊಖೇಲಾ ತಯಾಂಗ್ ಎಂಬ ಒಬ್ಬರೇ ಮಹಿಳೆ ಮತ ಚಲಾಯಿಸಿದರು. ಇಡೀ ಹಳ್ಳಿಯಲ್ಲಿನ ಏಕೈಕ ಮತದಾರರು ಇವರು
ಮಣಿಪುರ: ಕೆಲವೆಡೆ ಗುಂಡಿನ ದಾಳಿ
ಇಂಫಾಲ್: ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದ ಎರಡು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿವೆ. ಆದರೆ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಮ್ನಾಪೊಕ್ವಿಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಮತಗಟ್ಟೆ ಬಳಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಮತದಾರರನ್ನು ಓಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ಅವರು ಹೇಳಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಉರಿಪೋಕ್ ಮತ್ತು ಇರೊಯಿಶೆಂಬಾದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ರಾಜಕೀಯ ಪಕ್ಷವೊಂದರ ಚುನಾವಣಾ ಏಜೆಂಟರನ್ನು ಬೆದರಿಸಿ ಮತಗಟ್ಟೆಗಳಿಂದ ಹೊರ ಹೋಗುವಂತೆ ತಾಕೀತು ಮಾಡಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇರೊಯಿಶೆಂಬಾದಲ್ಲಿ ಮತಗಟ್ಟೆಗಳಲ್ಲಿನ ಚುನಾವಣಾ ಸಾಮಗ್ರಿಗಳು ಮತ್ತು ಸಲಕರಣೆಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ. ಇಂಫಾಲ್ ಪೂರ್ವ ಜಿಲ್ಲೆಯ ಖೋಂಗ್ಮನ್ ವಲಯ 4ರಲ್ಲಿ ಮತದಾರರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಇವಿಎಂಗಳಿಗೆ ಹಾನಿ ಮಾಡಲಾಗಿದೆ. ಕೀರಾವೊ ವ್ಯಾಪ್ತಿಯ ಕಿಯಾಮ್ಗೆಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ರಬ್ಬರ್ ಗುಂಡುಗಳನ್ನು ಹಾರಿಸಿ ಮತಗಟ್ಟೆಗಳಲ್ಲಿದ್ದ ಕಾಂಗ್ರೆಸ್ ಏಜೆಂಟರನ್ನು ಬೆದರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.