ಮುಂಬೈ: ಲೋಕಸಭಾ ಚುನಾವಣೆಗೆ ಎನ್ಸಿಪಿ(ಶರದ್ಚಂದ್ರ ಪವಾರ್ ಬಣ) ಐದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಾರಾಮತಿ ಕ್ಷೇತ್ರದಿಂದ ಸುಪ್ರಿಯಾ ಸುಳೆ, ಶಿರೂರು ಕ್ಷೇತ್ರದಿಂದ ಅಮೋಲ್ ಕೊಲ್ಹೆ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದೆ.
ನಾಸಿಕ್ ಜಿಲ್ಲೆಯ ದಿಂಡೋರಿ ಮೀಸಲು ಕ್ಷೇತ್ರದಿಂದ ಭಾಸ್ಕರ್ ಭಾಗ್ರೆ ಅವರಿಗೆ ಟಿಕೆಟ್ ನೀಡಿದ್ದು, ಹಾಲಿ ಬಿಜೆಪಿ ಸಂಸದೆ ಭಾರತಿ ಪವಾರ್ ವಿರುದ್ಧ ಭಾಗ್ರೆ ಸೆಣಸಾಡಲಿದ್ದಾರೆ. ವಾರ್ಧಾ ಕ್ಷೇತ್ರದಿಂದ ಕಾಂಗ್ರೆಸ್ ಮಾಜಿ ಶಾಸಕ ಅಮರ್ ಕಾಳೆ ಅವರಿಗೆ ಟಿಕೆಟ್ ಘೋಷಿಸಿದೆ.
ಇತ್ತೀಚೆಗೆ ಎನ್ಸಿಪಿ ಅಜಿತ್ ಪವಾರ್ ಬಣ ತೊರೆದು ಶರದ್ ಪವಾರ್ ಬಣ ಸೇರಿಕೊಂಡಿದ್ದ ಪಾರ್ನರ್ ಕ್ಷೇತ್ರದ ಹಾಲಿ ಶಾಸಕ ನಿಲೇಶ್ ಲಂಕೆ ಅವರಿಗೂ ಟಿಕೆಟ್ ನೀಡಲಾಗಿದೆ. ಅಹ್ಮದ್ನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದ ಸುಜಯ್ ವಿಖೆ ಪಾಟೀಲ್ ವಿರುದ್ಧ ಲಂಕೆ ಅವರನ್ನು ಕಣಕ್ಕಿಳಿಸಲಾಗಿದೆ.
ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ(ಎನ್ಸಿಪಿ– ಶಿವಸೇನಾ(ಯುಬಿಟಿ)– ಕಾಂಗ್ರೆಸ್) ಮಿತ್ರ ಪಕ್ಷವಾಗಿರುವ ಎನ್ಸಿಪಿ, 48 ಲೋಕಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.