ಕೊಪ್ಪಳ: ಇಲ್ಲಿನ ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಸಂಸದ ಸಂಗಣ್ಣ ಕರಡಿ ಅವರನ್ನು ಮನವೊಲಿಸಲು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರೊಂದಿಗೆ ಚರ್ಚಿಸಿದರು.
ಗುರುವಾರ ರಾತ್ರಿ ಸಂಗಣ್ಣ ಅವರ ಮನೆಗೆ ಭೇಟಿ ನೀಡಿದ ರವಿಕುಮಾರ್ ಅವರನ್ನು ಖುದ್ದು ಸಂಸದರೇ ಬರಮಾಡಿಕೊಂಡರು. ಬಳಿಕ ಸುಮಾರು ಒಂದು ತಾಸು ಗೋಪ್ಯ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರವಿಕುಮಾರ್ ‘ಪಕ್ಷದ ಹಿರಿಯರಾದ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಂಗಣ್ಣ ಜೊತೆ ಮಾತುಕತೆ ನಡೆಸಲಿದ್ದಾರೆ. ಆದ್ದರಿಂದ ಒಂದೆರೆಡು ದಿನಗಳಲ್ಲಿ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಳ್ಳಲಾಗುವುದು. ಯಾವಾಗ ಭೇಟಿಯಾಗಲಿದ್ದಾರೆ ಎನ್ನುವುದನ್ನು ಶುಕ್ರವಾರ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.
‘ಸಂಗಣ್ಣ ಅವರು ನಮ್ಮ ಪಕ್ಷದ ಪ್ರಮುಖ ನಾಯಕ. ಆಂತರಿಕವಾಗಿ ಏನೇ ಸಣ್ಣ ಸಮಸ್ಯೆಗಳಿದ್ದರೂ ಅವುಗಳನ್ನು ನಮ್ಮ ನಾಯಕರು ಪರಿಹರಿಸುತ್ತಾರೆ. ಬೆಂಗಳೂರಿನಿಂದ ಬಂದ ಬಳಿಕ ಅವರು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಆರಂಭಿಸುವರು. ಅವರೊಂದಿಗಿನ ಮಾತುಕತೆ ಫಲಪ್ರದವಾಗಿದೆ’ ಎಂದರು.
ಸಂಗಣ್ಣ ಕರಡಿ ಮಾತನಾಡಿ ‘ಬೆಂಗಳೂರಿಗೆ ಬರುವಂತೆ ರವಿಕುಮಾರ್ ಹೇಳಿದ್ದಾರೆ. ಅವರು ಸಮಯ ಕೊಟ್ಟಾಗ ಹೋಗುವೆ. ಬಳಿಕ ಏನಾಗುತ್ತದೆಯೊ ನೋಡೋಣ. ನನ್ನ ಪ್ರಶ್ನೆಗಳಿಗೂ ಅಲ್ಲಿಯೇ ಉತ್ತರ ಸಿಗುತ್ತದೆ ಎಂದಿದ್ದಾರೆ’ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಘಟಕದ ಕಾರ್ಯದರ್ಶಿ ಶರಣು ತಳ್ಳಿಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.