ಬೆಂಗಳೂರು: ಕಾಂಗ್ರೆಸ್ ಬಿಡುಗಡೆ ಮಾಡಿರುವ ‘#ನನ್ನ ಕರ್ನಾಟಕ’ದಲ್ಲಿ ರಾಜ್ಯದ ಭೂಪಟವನ್ನು ವಿರೂಪಗೊಳಿಸಲಾಗಿದೆ. ಇದು ಅಕ್ಷಮ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
‘ಸಿದ್ದರಾಮಯ್ಯನವರೇ, ನಿಮಗೆ ಕರ್ನಾಟಕ, ಭೂಪಟ, ಧ್ವಜ ಚುನಾವಣಾ ಪ್ರಚಾರದ ವಸ್ತು ಇರಬಹುದು. ಆದರೆ, ನನಗೆ, ನಾಡಿಗೆ ಇದರ ಬಗ್ಗೆ ಅತೀವ ಭಕ್ತಿ ಮತ್ತು ಗೌರವವಿದೆ. ಇದು ದೇಶದ ಭೂಪಟ ವಿರೂಪಗೊಳಿಸಿದ್ದಷ್ಟೇ ಅಕ್ಷಮ್ಯ’ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
**
‘ರಾಹುಲ್ ಅವರದ್ದು ಎಲೆಕ್ಷನ್ ಟೂರಿಸಂ’
ಬೆಳಗಾವಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸವನ್ನು ‘ಎಲೆಕ್ಷನ್ ಟೂರಿಸಂ’ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಶನಿವಾರ ವ್ಯಂಗ್ಯವಾಡಿದರು.
‘ಪ್ರವಾಸದ ವೇಳೆ ಅವರು ಮಠ, ಮಂದಿರಗಳಿಗೆ ಭೇಟಿ ನೀಡುತ್ತಿರುವುದು ಸಂತೋಷದ ಸಂಗತಿ. ಇಷ್ಟು ದಿನ ಏಕೆ ದೇವಸ್ಥಾನಗಳು ನೆನಪಿಗೆ ಬರಲಿಲ್ಲ’ ಎಂದು ಅವರು ಪ್ರಶ್ನಿಸಿದರು.