ಶಿಮ್ಲಾ: ‘ಪ್ರಧಾನಿ ನರೇಂದ್ರ ಮೋದಿ ನನ್ನ, ನನ್ನ ಕುಟುಂಬವನ್ನು ದ್ವೇಷಿಸಿದರೂ, ಅದಕ್ಕೆ ನಾನು ಪ್ರೀತಿಯಿಂದಲೇ ಪ್ರತಿಕ್ರಿಯಿಸುತ್ತೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಹಿಮಾಚಲ ಪ್ರದೇಶದ ಉನಾದಲ್ಲಿ ಚುನಾವಣೆ ಪ್ರಚಾರಭಾಷಣ ಮಾಡಿದ ಅವರು, ಬಿಜೆಪಿ ನೇತೃತ್ವದ ಸರ್ಕಾರದ ನೋಟು ರದ್ದತಿ ಮತ್ತು ಜಿಎಸ್ಟಿ ಪದ್ಧತಿ ಜಾರಿ ಕ್ರಮವನ್ನು ತರಾಟೆಗೆ ತೆಗೆದುಕೊಂಡರು.
ಮೋದಿ ಅವರು ನನ್ನ ಬಗ್ಗೆ ಹಾಗೂ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ,ರಾಜೀವ್ ಗಾಂಧಿ ಬಗೆಗೆ ದ್ವೇಷದಿಂದಲೇ ಮಾತನಾಡುತ್ತಾರೆ. ಆದರೆ, ನಾನು ಅವರಿಗೆ ಪ್ರೀತಿಯಿಂದಲೇ ಪ್ರತಿಕ್ರಿಯಿಸುತ್ತೇನೆ.
ರಾಜಕಾರಣವನ್ನು ಕಬಡ್ಡಿ ಕ್ರೀಡೆಗೆ ಹೋಲಿಸಿದ ಅವರು, ಮೋದಿ ಅವರು ತಮ್ಮ ಕೋಚ್ ಎಲ್.ಕೆ. ಅಡ್ವಾಣಿ ಅವರಿಗೆ ಕಾಲೆಳೆದರು ಎಂದು ತರಾಟೆಗೆ ತೆಗೆದುಕೊಂಡರು.
‘ಚೌಕೀದಾರ್ ಚೋರ್ ಹೈ’ ಘೋಷಣೆಯನ್ನುಉಲ್ಲೇಖಿಸಿದ ಅವರು, ಮೋದಿ ದೇಶದಲ್ಲಿ 15 ಶ್ರೀಮಂತ ಕುಟುಂಬಗಳ ಹಿತಾಸಕ್ತಿಯನ್ನಷ್ಟೇ ಗಮನಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಹಿಮಾಚಲ ಪ್ರದೇಶದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಮೇ 19ರಂದು ಮತದಾನ ನಡೆಯಲಿದೆ.