ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಗೆ ಮುದ್ದಿನ ಕರಿಯನನ್ನು ಕರೆತರಲಾಗಿತ್ತು. ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ರವಾನೆ ಮಾಡುವುದಕ್ಕೂ ಮುನ್ನ ಲೀಲಮ್ಮನ ದರ್ಶನ ಪಡೆದ ‘ಕರಿಯ’ ಕಣ್ಣೀರು ಹಾಕಿತು.
ಪಾರ್ಥಿವ ಶರೀರವನ್ನು ಒಮ್ಮೆ ದಿಟ್ಟಿಸಿ ನೋಡಿ, ಮೌನವಾಯಿತು. ಪಕ್ಕದಲ್ಲಿದ್ದ ವಿನೋದ್ ರಾಜ್ ಅವರು ಶ್ವಾನವನ್ನು ಮುದ್ದಾಡಿ ಮೈದಡವಿದರು. ಪ್ರೀತಿಯ ಶ್ವಾನವನ್ನು ಸಂತೈಸಿದರು. ಕರಿಯನ ಸ್ಥಿತಿಕಂಡು ಭದ್ರತಾ ಕೆಲಸಕ್ಕೆ ನಿಯೋಜಿಸಲಾಗಿದ್ದ ಪೊಲೀಸರೂ ಆ ಕ್ಷಣದಲ್ಲಿ ಭಾವುಕರಾದರು.
‘ಶುಕ್ರವಾರ ಸಂಜೆಯಿಂದಲೂ ‘ಕರಿಯ’ ಊಟ ಸೇವಿಸುತ್ತಿಲ್ಲ. ಸೋಲದೇವನಹಳ್ಳಿಯ ಮನೆಯಲ್ಲೂ ಒಂದೇ ಸಮನೆ ಬೊಗಳುತ್ತಿದೆ’ ಎಂದು ತೋಟದ ಮನೆ ಕಾರ್ಮಿಕರು ಹೇಳಿದರು.