ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಸೆಟ್ಟೇರುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ನಲ್ಲಿ ನಟ, ರಾಜಕಾರಣಿ ಎಂ. ಜಿ. ರಾಮಚಂದ್ರನ್ ಅವರ ಪಾತ್ರವನ್ನು ತಮಿಳು ನಟ ಅರವಿಂದ ಸ್ವಾಮಿ ನಿರ್ವಹಿಸಲಿದ್ದಾರೆ.
‘ಜಡ್ಜ್ಮೆಂಟಲ್ ಕ್ಯಾ ಹೈ’ ಸಿನಿಮಾ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಂಗನಾ ಈಗ ಮುಂದಿನ ಚಿತ್ರದತ್ತ ಗಮನ ಹರಿಸಿದ್ದು, ತಮಿಳಿನಲ್ಲಿ ಈ ಚಿತ್ರ ಅವರ ಚೊಚ್ಚಲ ಚಿತ್ರ. ಇದನ್ನು ಎ.ಎಲ್ ವಿಜಯ್ ನಿರ್ದೇಶಿಸುತ್ತಿದ್ದಾರೆ.
ಜಯಲಲಿತಾ ರಾಜಕೀಯದ ಮೊದಲ ಪಾಠ ಕಲಿತದ್ದು ಎಂಜಿಆರ್ ಅವರಿಂದ. ರಾಜಕೀಯಕ್ಕೆ ಜಯಲಲಿತಾ ಪ್ರವೇಶಿಸಲು ಕಾರಣ ಕೂಡ ಅವರೇ. ಎಂಜಿಆರ್ ಸಾವಿನ ಬಳಿಕ ಎಐಎಡಿಎಂಕೆ ಪಕ್ಷದ ನೇತೃತ್ವ ವಹಿಸಿದರು. ನಂತರ ಜನಪ್ರಿಯತೆ ಗಳಿಸಿ ಜನರಿಂದ ಅಮ್ಮ ಎಂದು ಕರೆಸಿಕೊಂಡರು.
ಇದೇ ಕತೆಯನ್ನು ‘ತಲೈವಿ’ ಸಿನಿಮಾ ಹೊಂದಿದೆ ಎನ್ನಲಾಗಿದೆ. ಹೀಗಾಗಿ ಅರವಿಂದ ಸ್ವಾಮಿ ಪಾತ್ರ ಕುತೂಹಲ ಕೆರಳಿಸಿದೆ. ಅಕ್ಟೋಬರ್ನಲ್ಲಿ ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.