ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಯಶಸ್ವಿಯಾಗಿ ಮುಗಿಸಿ ಬಂದ ನಂತರ ನಟ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗಳಿಗೋಸ್ಕರ ಸ್ವಲ್ಪ ಬಿಡುವು ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ #AskKiccha ಸೆಷನ್ ನಡೆಸಿದ ಅವರು ಅಭಿಮಾನಿಗಳ ಜೊತೆ ಮನದ ಮಾತು ಹಂಚಿಕೊಂಡಿದ್ದಾರೆ.
ಈ ವೇಳೆ ಬಿಗ್ ಬಾಸ್ ಬಗ್ಗೆ ಹಲವಾರು ಪ್ರಶ್ನೆಗಳು ಬಂದಿದ್ದು, ಕಾರ್ತಿಕ್ ಮಹೇಶ್, ವಿನಯ್, ಡ್ರೋನ್ ಪ್ರತಾಪ್ ಬಗ್ಗೆ ಒಂದು ಪದದಲ್ಲಿ ಉತ್ತರಿಸುವಂತೆ ಅಭಿಮಾನಿಗಳು ಮನವಿ ಮಾಡಿದ್ದರು. ಅಭಿಮಾನಿಗಳ ಎಲ್ಲ ಪ್ರಶ್ನೆಗೆ ಕಿಚ್ಚ ಸೌಮ್ಯವಾಗಿ ಉತ್ತರ ನೀಡಿದ್ದಾರೆ.
ಈ ನಡುವೆ ಕೆಲವು ಅಭಿಮಾನಿಗಳು ದರ್ಶನ್–ಕಿಚ್ಚ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ನಿಮ್ಮ ಮತ್ತು ದರ್ಶನ್ ಅವರ ನಡುವಿನ ಸಮಸ್ಯೆ ಯಾವಾಗ ಪರಿಹಾರವಾಗುತ್ತೆ? ಎಷ್ಟು ಸಮಯ ತೆಗೆದುಕೊಳ್ಳುತ್ತಿರಾ? ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಕಿಚ್ಚ, ‘ಸಮಸ್ಯೆ ಏನೆಂದು ಇಬ್ಬರು ಹುಡುಕುತ್ತಾ ಇದ್ದೀವಿ’ ಎಂದು ತಮಾಷೆ ಮಾಡಿದ್ದಾರೆ.
ದರ್ಶನ್ ಬಗ್ಗೆ ಒಂದು ಮಾತು ಹೇಳಿ ಎಂದಿದ್ದಕ್ಕೆ, ‘ನಾನು ಯಾವಾಗಲೂ ಅವರಿಗೆ(ದರ್ಶನ್) ಒಳಿತನ್ನು ಹಾರೈಸುತ್ತೇನೆ’ ಎಂದಿದ್ದಾರೆ.
ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಕಿಚ್ಚ
ಡ್ರೋನ್ ಪ್ರತಾಪ್ ಅವರು ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರ ಬಗ್ಗೆ ಕೆಲ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದು, ಈ ಕುರಿತಂತೆ ನೇರವಾಗಿ ಕಿಚ್ಚನನ್ನು ಪ್ರಶ್ನಿಸಿದ್ದಾರೆ.
‘ಡ್ರೋನ್ ಪ್ರತಾಪ್ ಅವರು ಎರಡನೇ ಸ್ಥಾನ ಪಡೆಯುವುದಕ್ಕೆ ಅರ್ಹರಲ್ಲ ಎಂದು ನಿಮಗೆ ತಿಳಿದಿತ್ತು. ಆದರೂ ನೀವು ಹೇಗೆ ಆ ಸ್ಥಾನದಲ್ಲಿ ನಿಂತು ಕಾರ್ಯಕ್ರಮ ನಡೆಸಿಕೊಟ್ಟಿದ್ದೀರಿ?’ ಎಂದು ಅಭಿಮಾನಿಯೊಬ್ಬರು ಖಾರವಾಗಿ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, ಅವರ(ಡ್ರೋನ್ ಪ್ರತಾಪ್) ಪ್ರಯತ್ನದ ಫಲವಾಗಿ ಅವರು ಆ ಸ್ಥಾನಕ್ಕೆ ಬಂದಿದ್ದಾರೆ. ಅದನ್ನು ಪ್ರಶಂಸಿಸದಿರುವುದು ಸರಿಯಲ್ಲ ಎಂದಿದ್ದಾರೆ.
ಡ್ರೋನ್ ಪ್ರತಾಪ್ ಬಗ್ಗೆ ಒಂದು ಮಾತು ಹೇಳಿ ಎಂದಿದಕ್ಕೆ, ‘ಸ್ವೀಟ್’ ಎಂದು ಹೇಳಿದ್ದಾರೆ.