*ಲಕ್ಕಿ ಗುಂಡಮ್ಮಳನ್ನು ಮನೆಯಿಂದ ಹೊರ ಹಾಕಿದ್ದಾನೆ, ಮುಂದೆ?
ಗುಂಡಮ್ಮನ ಮನಸ್ಸಿನಲ್ಲಿ ಇರೋದು ಒಂದೇ ಒಂದು. ಅದು ಲಕ್ಕಿ ಮನಸ್ಸು ಗೆಲ್ಲಬೇಕು. ಅವನ ಪ್ರೀತಿ ಪಡೀಬೇಕು ಅಂತ. ಜತೆಗೆ, ಮನೆಯವರ ಮನಸ್ಸನ್ನೂ ಗೆಲ್ಲಬೇಕೆಂದು ಪುಟ್ಟತ್ತೆ ಸಲಹೆ ಕೊಟ್ರು. ‘ಡಾನ್ಸ್ ಕರ್ನಾಟಕ ಡಾನ್ಸ್’ನಲ್ಲಿ(ಡಿಕೆಡಿ) ಭಾಗವಹಿಸು, ನೀನು ಅನ್ಕೊಂಡಿದ್ದು ಆಗತ್ತೆ ಅಂತ. ನನಗೂ ಸರಿ ಅನ್ನಿಸಿ ಒಪ್ಪಿಕೊಂಡೆ. ಲಕ್ಕಿ ಮನಸ್ಸನ್ನ ಗುಂಡಮ್ಮ ಗೆಲ್ತಾಳೆ.
*ಮಾವ ಗುಂಡಮ್ಮಗೆ ಯಾವಾಗ್ಲೂ ಬೆಂಬಲವಾಗಿ ನಿಲ್ತಾರೆ. ಈ ಸಂದರ್ಭದಲ್ಲಿ ಯಾಕಿಲ್ಲ?
ಮಾವ ಯಾವಾಗ್ಲೂ ಸೊಸೇನ ಬೆಂಬಲಿಸ್ತಾರೆ. ಹಳ್ಳಿ ಕಥೆಯಾದ್ದರಿಂದ, ಅಲ್ಲಿ ಹುಡುಗೀರು ಹೀಗೆಲ್ಲಾ ಹೊರಗೆ ಹೋಗೋರೇ ಕಮ್ಮಿ. ಟಿ.ವಿ, ಸಿನಿಮಾ ಅಂದ್ರೆ ಹಳ್ಳಿ ಜನ ಬೇರೆ ರೀತಿ ಯೋಚನೆ ಮಾಡ್ತಾರೆ. ಹಂಗೆ, ಗುಂಡಮ್ಮನ ಮನೆಲೂ ಯೋಚನೆ ಮಾಡಿದಾರೆ. ಆದರೆ, ಮಾವ ಬೇರೆ ಥರ. ಹೆಣ್ಣು ಯಾವುದ್ರಲ್ಲೂ ಕಮ್ಮಿ ಇಲ್ಲ. ಅವರಲ್ಲೂ ಸಾಧಿಸೋ ಛಲ ಇದೆ. ಅವರು ಕೀಳರಿಮೆ ಇಟ್ಟೊಂಡು ಬದುಕಬಾರದು. ಆಕೆಗೆ ಏನು ಇಷ್ಟವೋ ಹಾಗೆ, ಬದುಕಬೇಕು ಅನ್ನೋ ಮನಃಸ್ಥಿತಿ ಮಾವಂದು. ನನಗೆ ಅವರ ಸಂಪೂರ್ಣ ಬೆಂಬಲ ಇದೆ.
* ಲಕ್ಕಿಯ ಪ್ರೇಮ ನಿವೇದನೆ ಯಾವಾಗ?
ಲಕ್ಕಿಗೆ ಪ್ರೀತಿ ಇದೆ. ನಿನಗೆ ಗುಂಡಮ್ಮನ ಮೇಲೆ ಪ್ರೀತಿ ಇದೆ ಅಂತ ಹೇಳೋಕೆ ಒಬ್ಬರು ಬೇಕಷ್ಟೆ. ಅವನು ಪ್ರೀತಿಸ್ತಿದಾನೆ ಅಂತ ಪೂರ್ತಿ ತೋರಿಸಿದ್ರೆ ಮಜ ಇರಲ್ಲ. ಚಿಕ್ಕ ಚಿಕ್ಕ ಸಂಗತಿಗಳು, ಪ್ರೀತಿ ತುಂಬಿದ ಕ್ಷಣಗಳು ಕಳೆದು ಹೋಗತ್ತೆ. ಈ ಚಿಕ್ಕ ವಿಷಯಗಳಲ್ಲೇ ಖುಷಿ ಕಾಣ್ತಾ ಇದಾಳೆ ಗುಂಡಮ್ಮ. ಆಕೆ ಜೊತೆ ಲಕ್ಕಿ ಇದಾನೆ. ಪ್ರೀತಿ ನಿವೇದನೆ ಯಾವಾಗ ಮಾಡ್ತಾನೆ ಅಂತ ಗುಂಡಮ್ಮ ಕೂಡ ಕಾಯ್ತಾ ಇದಾಳೆ. ಸದ್ಯದಲ್ಲೇ ಪ್ರೇಮ ನಿವೇದನೆ ಮಾಡ್ತಾರೆ. ಅದಂತು ಪಕ್ಕಾ...
*ಲಕ್ಕಿ ಮತ್ತೆ ನಿಮ್ಮನ್ನ ಮನೆಗೆ ಕರೆದುಕೊಂಡು ಹೋಗ್ತಾರಲ್ಲ?
ಗೂಂಡಾಗಳಿಂದ ಲಕ್ಕಿ ಗುಂಡಮ್ಮನನ್ನ ಕಾಪಾಡಿ, ಮತ್ತೆ ಮನೆಗೆ ಕರೆದುಕೊಂಡು ಹೋಗ್ತಾ ಇದಾನೆ. ಇಲ್ಲಿ ಮತ್ತೆ ಸಣ್ಣ ಟ್ವಿಸ್ಟ್ ಇದೆ. ಮನೆಗೆ ಬಂದ ಮೇಲೆ ಹೆಂಡ್ತಿ ಡಿಕೆಡಿಯಲ್ಲಿ ಭಾಗವಹಿಸಿದಾಳೆ ಅಂತ ಗೊತ್ತಾದ್ರೆ ಮತ್ತೆ ಕೋಪುಸ್ಕೊತಾನೆ. ಹಾಗಾಗಿ, ಇದೆಲ್ಲ ಕೆಟ್ಟದು ಅಲ್ಲ ಅಂತ ಗುಂಡಮ್ಮ ಗಂಡನ್ನ ಒಪ್ಪಿಸಬೇಕು. ಲಕ್ಕಿ ಹೇಗೆ ಗುಂಡಮ್ಮ ಡಾನ್ಸ್ ಮಾಡಕೆ ಒಪ್ತಾನೆ ಅನ್ನೋದೇ ಮುಂದಿನ ಕಥೆ.
*ಡಿಕೆಡಿ ಶೂಟಿಂಗ್ ಎಲ್ಲ ಹೇಗೆ ನಡಿತಾ ಇದೆ?
ಮುಂಚೆ, ಡಾನ್ಸ್ ಕರ್ನಾಟಕ ಡಾನ್ಸ್ಗೆ ರಿಹರ್ಸಲ್ಗೆ ಹೋಗ್ತಿದ್ದೆ. ಅಲ್ಲಿಂದ ಧಾರಾವಾಹಿ ಶೂಟಿಂಗ್ಗೆ ಹೋಗ್ತಿದ್ದೆ. ಡಬಲ್ ಕೆಲಸ ಆಗ್ತಿತ್ತು. ಎರಡರ ನಡುವೆ ತುಂಬಾ ಕಮ್ಮಿ ಸಮಯ ಸಿಗ್ತಿತ್ತು. ಈಗ್ಲೂ ಹಂಗೇ ಇದೆ. ಶೂಟಿಂಗ್ ಮುಗ್ಸಿ, ರಿಹರ್ಸಲ್ಗೆ ಹೋಗಬೇಕು. ನೃತ್ಯ ಸಂಯೋಜಕರೂ ಸಹಾಯ ಮಾಡ್ತಾ ಇದಾರೆ. ಡಾನ್ಸ್ ಬಗ್ಗೆ ಅಲ್ಪಸ್ವಲ್ಪ ಗೊತ್ತಿರೋದ್ರಿಂದ ಸುಲಭ ಅನ್ನಿಸ್ತಾ ಇದೆ. ಶೋನಲ್ಲಿ ಇದ್ದಾಗ, ನಾನೂ ಡಾನ್ಸ್ ಮಾಡಬಹುದಾ ಅಂತ ಅನ್ನಿಸಿತ್ತು. ಆಮೇಲೆ ಅನ್ನಿಸ್ತು ನಾನೂ ಡಾನ್ಸ್ ಮಾಡಬಹುದು ಅಂತ.
ಈ ರೀತಿ ಕಥೆ ಮಾಡೋಕೂ ಇದೇ ಕಾರಣ. ಯಾರು ಬೇಕಾದರೂ ಡಾನ್ಸ್ ಮಾಡಬಹುದು ಅಂತ ಒಂದು ಮಾದರಿ ಸೆಟ್ ಮಾಡಬೇಕು ಅನ್ನೋದೇ ಉದ್ದೇಶ.
* ಈ ಧಾರಾವಾಹಿ ನಿಮ್ಮ ಜೀವನಕ್ಕೆ ಎಷ್ಟು ಮುಖ್ಯ ಅಂತ ಭಾವಿಸ್ತೀರಿ?
ಈ ಧಾರಾವಾಹಿ ನನ್ನನ್ನು ತುಂಬಾ ಬದಲಾಯಿಸಿದೆ. ಗುಂಡಮ್ಮಂಗು ನಂಗೂ ತುಂಬಾ ಹೋಲಿಕೆ ಇತ್ತು. ಇಲ್ಲಿ ಕೆಲಸ ಮಾಡ್ತಾ ಮಾಡ್ತಾ ಸಕಾರಾತ್ಮವಾಗಿ ಯೋಚನೆ ಮಾಡೋದ್ನ ಕಲಿತೆ. ನನಗೂ ಮುಂಚೆ ಕೀಳರಿಮೆ ಇತ್ತು. ನಾನು ದಪ್ಪ ಇದೀನಿ. ನನ್ನ ಕೈಲಿ ಏನೂ ಮಾಡೋಕೆ ಆಗಲ್ಲ ಅಂತ. ಆದರೆ, ಈಗ ಹಾಗಿಲ್ಲ. ಜೀವನವನ್ನ ತುಂಬಾ ಪಾಸಿಟಿವ್ ಆಗಿ ನೋಡೋಕೆ ಕಲಿತೆ.
ಧಾರಾವಾಹಿ ಶುರು ಮಾಡಬೇಕಾದ್ರೆ ನಮಗೆ ಭಯ ಇತ್ತು. ಜನ ಇದನ್ನ ಸ್ವೀಕರಿಸ್ತಾರೋ ಇಲ್ವೋ ಅಂತ. ಗುಂಡಮ್ಮ ಅನ್ನೊ ಪಾತ್ರವನ್ನ ಹೇಗೆ ಗ್ರಹಿಸ್ತಾರೆ ಅಂತ ಭಯ ಇತ್ತು. ಆದರೆ, ತುಂಬಾ ಪ್ರೀತಿಯಿಂದ ಜನ ಗುಂಡಮ್ಮನನ್ನ ಸ್ವೀಕರಿಸಿದ್ದಾರೆ. ತುಂಬಾ ಜನ ಹೇಳ್ತಾರೆ, ನೀವು ಸಣ್ಣ ಆಗಬೇಡಿ, ಹೀಗೇ ಇರಿ ಅಂತ. ಅಷ್ಟು ಪ್ರೀತಿ ಕೊಟ್ಟಿದಾರೆ ಜನ. ತುಂಬಾ ಸಂತೋಷ ಆಗುತ್ತೆ.
*ನಿಮ್ಮ ಮುಂದಿನ ಪಯಣ?
ತುಂಬಾ ಆಫರ್ಗಳು ಬರ್ತಾ ಇವೆ. ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ಮುಗೀತು. ಆಗಸ್ಟ್ ಕೊನೆಗೆ ರಿಲೀಸ್ ಆಗುವ ನಿರೀಕ್ಷೆ ಇದೆ. ಸುದೀಪ್ ಅವರ ಅತ್ತೆ ಮಗಳ ಪಾತ್ರ ಮಾಡಿದೀನಿ. ಧಾರಾವಾಹಿ, ಡಾನ್ಸ್, ಸಿನಿಮಾ ಅಂತೆಲ್ಲ ಬ್ಯುಸಿ ಇರೋದ್ರಿಂದ ಬೇರೆ ಯಾವುದಕ್ಕೂ ಒಪ್ಕೋತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.