ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘777 ಚಾರ್ಲಿ’ ಸುದ್ದಿಗೋಷ್ಠಿಗೆ ‘ಚಾರ್ಲಿ’ಯೇ ಗೈರು! ಕಾರಣವೇನು ಗೊತ್ತಾ?

Last Updated 6 ಜೂನ್ 2022, 11:05 IST
ಅಕ್ಷರ ಗಾತ್ರ

ರಕ್ಷಿತ್‌ ಶೆಟ್ಟಿ ನಟನೆಯ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’ ಜೂನ್‌ 10ಕ್ಕೆ ಬಿಡುಗಡೆಯಾಗುತ್ತಿದೆ. ಬಿಡುಗಡೆ ಹೊಸ್ತಿಲಲ್ಲಿ ಚಿತ್ರತಂಡ ಸೋಮವಾರ ಬೆಂಗಳೂರಿನ ಶರ್‌ಟಾನ್‌ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿತ್ತು. ಆದರೆ ಸುದ್ದಿಗೋಷ್ಠಿ ಸಂದರ್ಭದಲ್ಲಿ ‘ಚಾರ್ಲಿ’ಯ ಗೈರು ಎದ್ದುಕಾಣುತ್ತಿತ್ತು. ಇದಕ್ಕೇನು ಕಾರಣ ಎಂಬುವುದನ್ನು ಸ್ವತಃ ರಕ್ಷಿತ್‌ ಶೆಟ್ಟಿ ವಿವರಿಸಿದ್ದಾರೆ.

ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಚಿತ್ರದ ಸುದ್ದಿಗೋಷ್ಠಿ ನಡೆದಿದೆ. ಎಲ್ಲ ಸುದ್ದಿಗೋಷ್ಠಿಗಳಲ್ಲಿ ಚಿತ್ರದಲ್ಲಿದ್ದ ‘ಚಾರ್ಲಿ’ ಹೆಸರಿನ ಶ್ವಾನ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಚಾರ್ಲಿಯ ತುಂಟಾಟದ ವಿಡಿಯೊ ಎಲ್ಲೆಡೆ ವೈರಲ್‌ ಆಗಿತ್ತು. ಆದರೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಾರ್ಲಿ ಗೈರಾಗಿತ್ತು. ಈ ಕುರಿತು ಮಾತನಾಡಿದ ರಕ್ಷಿತ್‌, ‘ನಮ್ಮ ಜೊತೆ ಇವತ್ತು ಚಾರ್ಲಿ ಇರಬೇಕಿತ್ತು. ಹೋಟೆಲ್‌ನವರು ಸಾಕುಪ್ರಾಣಿಗಳನ್ನು ಒಳಗೆ ಕರೆದುಕೊಂಡು ಬರಲು ಬಿಡುವುದಿಲ್ಲ ಎನ್ನುವುದು ಇಲ್ಲಿಗೆ ಬಂದ ನಂತರ ತಿಳಿಯಿತು. ಅನುಮತಿ ಪಡೆಯಲು ಬಹಳ ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ. ನಮ್ಮ ಈ ಸಿನಿಮಾ ಬಿಡುಗಡೆಯಾದ ಮೇಲೆ ಸ್ವಲ್ಪ ಜನರಲ್ಲಿ ಕೊಂಚ ಬದಲಾವಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಅದರಲ್ಲಿ ಈ ಹೋಟೆಲ್‌ನವರ ಯೋಚನೆಯೂ ಬದಲಾವಣೆ ಆಗುತ್ತದೆ ಎಂದುಕೊಂಡಿದ್ದೇನೆ’ ಎಂದರು.

ಚಿತ್ರದ ತೆಲುಗು ಅವತರಣಿಕೆಯನ್ನು ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ಅವರು ತಮ್ಮ ಸುರೇಶ್‌ ಪ್ರೊಡಕ್ಷನ್ಸ್‌ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯ ಬಳಿಕ ರಾಣಾ ಅವರು ಚಾರ್ಲಿ ಜೊತೆಗಿನ ಫೋಟೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಹೀಗೆ ಹೋದಲ್ಲೆಲ್ಲ ‘ಚಾರ್ಲಿ’ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಆದರೆ ಹೋಟೆಲ್‌ನ ನಿಯಮದಿಂದ ಬೆಂಗಳೂರಿನಲ್ಲಿ ‘ಚಾರ್ಲಿ’ಯೇ ಸುದ್ದಿಗೋಷ್ಠಿಗೆ ಪ್ರವೇಶಿಸದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT