ಬಹುತೇಕ ಹೊಸಬರಿಂದಲೇ ಕೂಡಿರುವ ‘ರಣ ರಾಕ್ಷಸ’ ಚಿತ್ರದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಮುರಳಿಪ್ರಸಾದ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಹೆಚ್.ಪಿ.ನರಸಿಂಹಸ್ವಾಮಿ ಬಂಡವಾಳ ಹೂಡುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
‘ತಂದೆ ಮಗಳ ಸಂಬಂಧವನ್ನು ಹೇಳುವ ಕಥೆ. ಚಿತ್ರ ಸೆನ್ಸಾರ್ ಮುಗಿಸಿ, ಬಿಡುಗಡೆಗೆ ಸಿದ್ಧವಿದೆ. ಇದೇ ತಿಂಗಳು ತೆರೆಗೆ ತರುವ ಆಲೋಚನೆಯಿದೆ. ಬೆಂಗಳೂರು, ಹೆಸರುಘಟ್ಟ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದರು ನಿರ್ದೇಶಕರು.
‘ನಮ್ಮ ತಂದೆ ರಂಗಭೂಮಿ ಕಲಾವಿದರು. ಅವರ ಬಳುವಳಿಯಿಂದಲೇ ನನಗೂ ಚಿಕ್ಕ ವಯಸ್ಸಿಗೆ ಅಭಿನಯದ ಗೀಳು ಹುಟ್ಟಿಕೊಂಡಿತು. ನಂತರ ಉದ್ಯಮದಲ್ಲಿ ಯಶಸ್ಸು ಕಂಡು ಚಿತ್ರಮಂದಿರದ ಮಾಲೀಕನಾದೆ. ಇದೆಲ್ಲದರ ಅನುಭವದಿಂದ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿ, ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ’ ಎಂದರು ಹೆಚ್.ಪಿ.ನರಸಿಂಹಸ್ವಾಮಿ.
ಪುಣ್ಯ ಗೌಡ, ದತ್ತ, ದಿಲೀಪ್ ಮುಂತಾದವರು ನಟಿಸಿದ್ದಾರೆ. ನಿರ್ದೇಶಕರೇ ಚಿತ್ರಕ್ಕೆ ಸಂಗೀತವನ್ನೂ ನೀಡಿದ್ದಾರೆ. ಭಾರ್ಗವ ಸಂಕಲನವಿದೆ.