ಬೆಂಗಳೂರು: ನಟ ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ, ‘ಹೊಯ್ಸಳ’ ಟ್ರೇಲರ್ ಬಿಡುಗಡೆಯಾಗಿದೆ. ನಿಷ್ಠಾವಂತ - ಖಡಕ್ ಪೊಲೀಸ್ ಪಾತ್ರ ನಿರ್ವಹಿಸಿರುವ ನಟ ಧನಂಜಯ, ತಪ್ಪು ಮಾಡಿದವರ ಪಾಲಿಗೆ ಖಾಕಿ ತೊಟ್ಟ ಯಮನಾಗಿ ಕಾಣಿಸಿಕೊಂಡಿದ್ದಾರೆ.
ಸಮಾರಂಭದಲ್ಲಿ ನಟ ಸುದೀಪ್ ಅವರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಆನಂದ್ ಆಡಿಯೊ ಯುಟ್ಯೂಬ್ ಚಾನಲ್ನಲ್ಲಿ ಟ್ರೇಲರ್ ಲಬ್ಯವಿದ್ದು, ಉತ್ತಮ ವೀಕ್ಷಣೆ ಕಂಡಿದೆ.
ಆಫೀಸರ್ ಗುರುದೇವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧನಂಜಯರವರನ್ನು ಸುದೀಪ್ ಅಭಿನಂದಿಸಿ ಶುಭ ಹಾರೈಸಿದರು.
ಚಿತ್ರವು ಇದೇ ಮಾರ್ಚ್.30ರಂದು ಬಿಡುಗಡೆಯಾಗಲಿದ್ದು ಡಾಲಿ ಧನಂಜಯ್ 25ನೇ ಚಿತ್ರ ಇದಾಗಿದೆ. ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅರ್ಪಿಸಿದ್ದು, ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಬ್ಯಾನರ್ನಡಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ರವರು ಚಿತ್ರವನ್ನು ನಿರ್ಮಿಸಿದ್ದಾರೆ. ವಿಜಯ್.ಎನ್ ರವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಎಸ್ ರವರು ಛಾಯಾಗ್ರಾಹಕರಾಗಿದ್ಡಾರೆ.
ಸಂಕಲನ ದೀಪು ಎಸ್ ಕುಮಾರ್, ಸಂಭಾಷಣೆ ಮಾಸ್ತಿ ಅವರದು. ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಜೋಡಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.