ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ದಿವಂಗತ ಟಿ.ಆರ್.ನರಸಿಂಹರಾಜು ಅವರಿಗೆ ನೂರು ತುಂಬಿದೆ. ಈ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳ ಜೊತೆಗೂಡಿ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲು ಅವರ ಕುಟುಂಬ ನಿರ್ಧರಿಸಿದೆ. ಈ ಕಾರ್ಯಕ್ರಮದ ಮೊದಲ ಹಂತದಲ್ಲಿ ‘ಹಾಸ್ಯಚಕ್ರವರ್ತಿ ಪ್ರಶಸ್ತಿ’ ಅನಾವರಣ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್ 12ರಂದು ಅರಮನೆ ಮೈದಾನದಲ್ಲಿ ಜನ್ಮ ಶತಮಾನೋತ್ಸವದ ಮೊದಲ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ಹೇಳಿದರು. ‘ಜನ್ಮ ಶತಮಾನೋತ್ಸವದ ಅಂಗವಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಾಸ್ಯ ಕಲಾವಿದರೊಬ್ಬರಿಗೆ ನರಸಿಂಹರಾಜು ಅವರ ಹೆಸರಿನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಲಿದ್ದೇವೆ. ಜೊತೆಗೆ ರಾಷ್ಟ್ರಮಟ್ಟದ ಹಾಸ್ಯ ಚಿತ್ರಗಳ ಪ್ರಶಸ್ತಿ, ಎಲ್ಲ ಭಾಷೆಯವರೂ ಒಳಗೊಂಡಂತೆ ಆಯಾ ಭಾಷೆಯ ಉತ್ತಮ ಹಾಸ್ಯ ಚಿತ್ರ, ಉತ್ತಮ ಹಾಸ್ಯ ಕಲಾವಿದ, ಉತ್ತಮ ಹಾಸ್ಯ ಬರಹಗಾರ, ಉತ್ತಮ ಹಾಸ್ಯ ಚಿತ್ರನಿರ್ದೇಶಕ ಪ್ರಶಸ್ತಿಯನ್ನು ನೀಡಲಿದ್ದೇವೆ. ಈ ಕಾರ್ಯಕ್ರಮ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ನಡೆಯಲಿದೆ’ ಎಂದರು.
‘ಆ.18ರಿಂದ ರಾಜ್ಯದಾದ್ಯಂತ ಪ್ರವಾಸದ ಮೂಲಕ ಈಗಿನ ಯುವಪೀಳಿಗೆಗೆ ನರಸಿಂಹರಾಜು ಅವರ ಸಿನಿಜೀವನದ ಪರಿಚಯ ಮಾಡಿಕೊಡಲಿದ್ದೇವೆ. ಎರಡು ಎಲ್ಇಡಿ ಟ್ರಕ್ಗಳು ಅವರ ಚಿತ್ರದ ತುಣುಕುಗಳನ್ನು, ಅವರ ಕುರಿತು ಮಾಡಿರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಿವೆ. ಸಂಚಾರಿ ತಂಡದಿಂದ ನರಸಿಂಹರಾಜು ಅವರ ಜೀವನಾಧಾರಿತ ನಾಟಕ ಹಾಗೂ ಅವರ ನಟನೆಯ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ನರಸಿಂಹರಾಜು ಅವರ ಹೆಸರಿನಲ್ಲಿ ರಾಜ್ಯಮಟ್ಟದ ಅಂತರಕಾಲೇಜು ನಾಟಕ ಸ್ಪರ್ಧೆ ನಡೆಯಲಿದ್ದು, ನರಸಿಂಹರಾಜು ಅವರು ನಟಿಸಿದ ನಾಟಕಗಳನ್ನೇ ತಂಡಗಳು ಮರುಸೃಷ್ಟಿ ಮಾಡಬೇಕು. ನರಸಿಂಹರಾಜು ಅವರ ಹೆಸರಿನಲ್ಲಿ ರಾಜದ ಆಯ್ದ ಜಿಲ್ಲೆಗಳಲ್ಲಿ ವೃತ್ತಿ ಮತ್ತು ಹವ್ಯಾಸಿ ನಾಟಕೋತ್ಸವದ ಜೊತೆಗೆ ರಾಷ್ಟ್ರಮಟ್ಟದ ಹಾಸ್ಯ ಕಿರುಚಿತ್ರೋತ್ಸವ ಆಯೋಜಿಸಲಿದ್ದೇವೆ’ ಎಂದು ಅವಿನಾಶ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.