ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ

ರೈತರ ಸಾಲ ಮನ್ನಾ ಮಾಡಿದ್ದೀರಾ, ನುಡಿದಂತೆ ನಡೆದಿದ್ದೀರಾ? ಎಐಸಿಸಿ ಅಧ್ಯಕ್ಷ ಪ್ರಶ್ನೆ
Last Updated 5 ಮೇ 2018, 11:34 IST
ಅಕ್ಷರ ಗಾತ್ರ

ಗಜೇಂದ್ರಗಡ: ಹೊಸ ತಾಲ್ಲೂಕು ರಚನೆಯಾದ ನಂತರ ಇದೇ ಮೊದಲ ಬಾರಿಗೆ ಗಜೇಂದ್ರಗಡ ಪಟ್ಟಣಕ್ಕೆ ಶುಕ್ರವಾರ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು.

ತಮ್ಮ ಭಾಷಣದುದ್ದಕ್ಕೂ ಬಸವಣ್ಣನವರನ್ನು ಸ್ಮರಿಸಿದ ರಾಹುಲ್‌, ಬಸವಣ್ಣ ಅವರು ವಿಚಾರಧಾರೆ ಕನ್ನಡಿಗರ ರಕ್ತದಲ್ಲಿ ಬೆರೆತಿದೆ. ಹೋದಡೆಯೆಲ್ಲ ಬಸವಣ್ಣ ಅವರ ಪ್ರತಿಮೆಗೆ ಹಾರ ಹಾಕಿ, ನಮಸ್ಕಾರ ಮಾಡುವ ಮೋದಿ ಅವರು, ಅವರು ಹೇಳಿದಂತೆ ನುಡಿದಂತೆ ನಡೆದಿದ್ದೀರಾ’ ಎಂದು ಚುಚ್ಚಿದರು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ದೇಶದ ಜನತೆಗೆ ನೀಡಿದ ಆಶ್ವಾಸನೆಯಲ್ಲಿ ಒಂದನ್ನಾದರೂ, ಈಡೇರಿಸಿದ್ದಿರಾ, ತೀವ್ರಗೊಂಡ ನಿರುದ್ಯೋಗ ಸಮಸ್ಯೆ, ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ (ಜಿಎಸ್‌ಟಿ), ಉನ್ನಾವ್‌, ಕಠುವಾ ಅತ್ಯಾಚಾರ ಪ್ರಕರಣಗಳು ಮೋದಿ ಸರ್ಕಾರದ ಕೊಡುಗೆಗಳು ಎಂದು ವ್ಯಂಗ್ಯವಾಡಿದರು.

‘ನುಡಿದಂತೆ ನಡೆ, ಹುಸಿಯ ನುಡಿಯಲೂ ಬೇಡ ಎಂದು ಬಸವಣ್ಣನವರು ಹೇಳಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಇಲ್ಲ ಸಲ್ಲದ ಸುಳ್ಳುಗಳನ್ನಾಡಿ, ತಮಗೆ ತೋಚಿದಂತೆ ಬಾಷಣ ಮಾಡುತ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹಲವು ಜನಪರ ಯೋಜನೆಗಳನ್ನು ಮಾಡಿದೆ. ಮೋದಿ ಅವರಿಗೆ ಇಲ್ಲಿ ಬಂದು ಅಭಿವೃದ್ಧಿ ಬಗ್ಗೆ ಮಾತನಾಡಲು ಯಾವುದೇ ಅಸ್ತ್ರಗಳಿಲ್ಲ’ ಎಂದರು.

ಅಮಿತ್ ಶಾ ಪುತ್ರ ₹50 ಸಾವಿರ ಬಂಡವಾಳ ಹೂಡಿ ಕೇವಲ 3 ತಿಂಗಳಲ್ಲಿ ₹80 ಕೋಟಿ ಸಂಪಾದನೆ ಮಾಡುತ್ತಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರ ಸಾಲಮನ್ನಾ ಮಾಡದ ಮೋದಿ ಸರ್ಕಾರವು ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಇದೆಂಥ ವಿಪರ್ಯಾಸ ಎಂದು ರಾಹುಲ್‌ ಪ್ರಶ್ನಿಸಿದರು.

ಸಚಿವ ಎಚ್.ಕೆ ಪಾಟೀಲ ಮಾತನಾಡಿ, ‘ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಗದಗ ಜಿಲ್ಲೆಗೆ ಸರ್ಕಾರದಿಂದ ದೊಡ್ಡ ಮೊತ್ತದ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಮಾಡಲಾಗಿದೆ. ಜತೆಗೆ ಸರ್ಕಾರ ಜಿಲ್ಲೆಗೆ ಗದಗ, ಲಕ್ಷ್ಮೇಶ್ವರ ಎರಡು ಹೊಸ ತಾಲ್ಲೂಕುಗಳನ್ನು ನೀಡಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಮತದಾರರು ಕಾರಣರಾಗಬೇಕು’ ಎಂದು ಕೋರಿದರು.

ಶಾಸಕ ಜಿ.ಎಸ್ ಪಾಟೀಲ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಸ್ವಾಭಿಮಾನದ ಬದುಕನ್ನು ಕೊಟ್ಟಿದೆ. ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡಿದ್ದೇನೆ’ ಎಂದರು.

‘ಚುನಾವಣೆಯಲ್ಲಿ ಮತ ನೀಡುವ ಮೂಲಕ ಮತ್ತೊಮ್ಮೆ ನಿಮ್ಮ ಸೇವೆಗೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು.

ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲರಾವ್, ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಪಕ್ಷದ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕಂ ಠಾಕೂರ್‌, ಬಿ.ಆರ್ ಯಾವಗಲ್‌, ರಾಮಕೃಷ್ಣ ದೊಡ್ಡಮನಿ, ಸಲೀಂ ಅಹ್ಮದ, ಡಿ.ಆರ್ ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುಡುಡಗಿ, ಅಶೋಕ ಬಾಗಮಾರ, ವಿ.ಆರ್ ಗುಡಿಸಾಗರ, ವೀರಣ್ಣ ಸೊನ್ನದ, ಐ.ಎಸ್ ಪಾಟೀಲ, ಪಿ. ಸುಬ್ರಮಣ್ಯಂ ರೆಡ್ಡಿ, ಶ್ರೀಕಾಂತ್ ಅವಧೂತ್, ಶ್ರೀನಿವಾಸ ಬಾಕಳೆ, ರೂಪಾ ಅಂಗಡಿ, ಅಶೋಕ ಮುಂದಾಲಿ ಇದ್ದರು.

ಗಾಳಿಗೆ ಕಿತ್ತುಹೋದ ಶಾಮಿಯಾನಾ

ರಾಹುಲ್ ಗಾಂಧಿ ಭಾಷಣ ಕೇಳಲು ಗಜೇಂದ್ರಗಡ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಟ್ರ್ಯಾಕ್ಟರ್, ಟಂಟಂ, ಲಾರಿಗಳಲ್ಲಿ ಬಂದಿದ್ದರು. ಕಾರ್ಯಕ್ರಮ ನಡೆಸಲು ಹಾಕಲಾಗಿದ್ದ ಶಾಮಿಯಾನ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ಕಿತ್ತು ಹೋಗಿತ್ತು. ಬೆಳಿಗ್ಗೆಯಿಂದ ಅವುಗಳನ್ನು ಕಟ್ಟುವ ಕೆಲಸ ಮಾಡಲಾಗಿತ್ತಾದರೂ, ಬಹುತೇಕ ಕಡೆ ಶಾಮಿಯಾನ ಇಲ್ಲದೆ ಜನರು ಬಿಸಿಲಿನಲ್ಲಿ ಕುಳಿತುಕೊಂಡಿದ್ದರು.

**
ಅಮಿತ್ ಶಾ ಅವರೇ ಈ ದೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಂಥ ಕಡುಭ್ರಷ್ಟ ಸರ್ಕಾರ ಬೇರೊಂದಿಲ್ಲ ಎಂದಿದ್ದಾರೆ. ₨35 ಸಾವಿರ ಕೋಟಿಯನ್ನು ರೆಡ್ಡಿ ಸಹೋದರರು ಲೂಟಿ ಮಾಡಿದ್ದಾರೆ
– ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ
**
ಕ್ಷೇತ್ರದಲ್ಲಿ ಒಂದು ಕೆಲಸ ಕಡಿಮೆ ಮಾಡಿರಬಹುದು. ಆದರೆ, ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡಿದ್ದೇನೆ
– ಜಿ.ಎಸ್. ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT