ಚಿತ್ರ ಸಾಹಿತಿ, ನಟ, ನಿರ್ದೇಶಕ ನಾಗೇಂದ್ರ ಪ್ರಸಾದ್ ಈಗ ‘ಕೃಷ್ಣಾವತಾರ’ ತಾಳಿದ್ದಾರೆ. ಹಾಗಂತ ಇದು ದ್ವಾಪರ ಯುಗದ ಶ್ರೀಕೃಷ್ಣನ ಕಥೆಯಲ್ಲ. ಕಲಿಯುಗದಲ್ಲಿ ಪ್ರಕೃತಿ, ಪರಿಸರ ಉಳಿಸಲು ಹೊಸ ಅವತಾರ ಎತ್ತಿದವನ ಕಥೆ. ಈ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
ಸಿರಿ ವೈ.ಎಸ್.ಆರ್. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಮಾಯಾಬಜಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗುರುಪ್ರಸಾದ್ ಕೆ. ಬಂಡವಾಳ ಹೂಡಿದ್ದಾರೆ. ಶುಭ ರಕ್ಷಾ, ತ್ರಿವೇಣಿ ರಾಜ್ ಚಿತ್ರದ ನಾಯಕಿಯರು.
‘ಹದಿನೈದು ದಿನ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ಈ ಕಥೆಯ ಆರಂಭ, ಅಂತ್ಯ ಎರಡೂ ನನ್ನ ಪಾತ್ರದಿಂದಲೇ ಆಗುತ್ತದೆ. ಈ ಸಿನಿಮಾ ಮೂಲಕ ನಿರ್ದೇಶಕರು ಏನೋ ಒಂದು ಹೊಸದನ್ನು ಹೇಳಲು ಹೊರಟಿದ್ದಾರೆ’ ಎಂದರು ನಾಗೇಂದ್ರ ಪ್ರಸಾದ್.
ಈ ಚಿತ್ರಕ್ಕೆ ರಾಜ ಶಿವಶಂಕರ್ ಛಾಯಾಚಿತ್ರಗ್ರಹಣವಿದ್ದು, ಎಬಿಎಂ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶ್ವನಾಥ್, ಮಾನಸಿ ಸುಧೀರ್, ರಘು ರಾಮನಕೊಪ್ಪ, ಪ್ರಕಾಶ್ ತುಮ್ಮಿನಾಡ್ ಮುಂತಾದವರು ತಾರಾಗಣದಲ್ಲಿದ್ದಾರೆ.