ದಕ್ಷಿಣ ಭಾರತದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾದ ರಜನೀಕಾಂತ್ ಅವರು ಬೆಳ್ಳಿತೆರೆ ಪ್ರವೇಶಿಸಿದ ನಾಲ್ಕು ದಶಕಗಳ ನಂತರ, ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ತೀರ್ಮಾನ ಮಾಡಿದ್ದು ಏಕೆ? ಅಂತಹ ನಿರ್ಧಾರಕ್ಕೆ ಬಂದಿದ್ದು ಏಕೆ ಎಂಬುದನ್ನು ರಜನೀಕಾಂತ್ ಅವರೇ ಈಗ ಹೇಳಿದ್ದಾರೆ.
‘ಸ್ಫೂರ್ತಿದಾಯಕವಾದ, ನಿಜ ಜೀವನದ ಮನರಂಜನಾ ಹೂರಣ ಇದರಲ್ಲಿ ಇದೆ ಎಂಬ ಕಾರಣಕ್ಕಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಯಿತು’ ಎಂದು ತಲೈವಾ ಹೇಳಿದ್ದಾರೆ. ರಜನೀಕಾಂತ್ ಅವರು ಬೇರ್ ಗ್ರಿಲ್ಸ್ ಜೊತೆ ‘ಮ್ಯಾನ್ ವರ್ಸಸ್ ವೈಲ್ಡ್’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಲಸಂರಕ್ಷಣೆ ಕುರಿತ ಮಾತುಗಳೂ ಇರಲಿವೆ. ‘ಇಂಟು ದಿ ವೈಲ್ಡ್ ಕಾರ್ಯಕ್ರಮವು ನಿಜಕ್ಕೂ ಅನನ್ಯವಾದುದು. ಇದು ಉತ್ಸಾಹ ಹೆಚ್ಚಿಸುವಂಥದ್ದು. ಹಾಗೆಯೇ, ಸಮಾಜದ ಒಳಿತಿನ ಉದ್ದೇಶ ಹೊಂದಿರುವಂಥದ್ದು’ ಎಂದು ರಜನೀಕಾಂತ್ ಹೇಳಿದ್ದಾರಂತೆ. ಈ ವಿಚಾರವನ್ನು ಡಿಸ್ಕವರಿ ವಾಹಿನಿಯೇ ಹೊರಗೆಡಹಿದೆ.
‘ಹಾಗಾಗಿ, ಡಿಸ್ಕವರಿ ವಾಹಿನಿಯ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿದಾಗ, ನಾನು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ತೀರ್ಮಾನಕ್ಕೆ ಬಂದೆ’ ಎಂದು ಅವರು ಹೇಳಿದ್ದಾರೆ. ಜಲಸಂರಕ್ಷಣೆಯ ಸಂದೇಶವನ್ನು ದೇಶದ ಪ್ರತಿ ಮನೆಗೂ ಕೊಂಡೊಯ್ಯಲು ಈ ಕಾರ್ಯಕ್ರಮ ಅತ್ಯಂತ ಸೂಕ್ತ ಎನ್ನುವುದು ರಜನಿ ಭಾವನೆ.