ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತ ಹಾಕಿದರೆ ಪ್ರಜಾಪ್ರಭುತ್ವ ಬೆಂಬಲಿಸಿದಂತೆ’

ಪ್ರಜಾಪ್ರಭುತ್ವವೇ ನಮ್ಮ ದೇವರು...
Last Updated 8 ಫೆಬ್ರುವರಿ 2018, 5:34 IST
ಅಕ್ಷರ ಗಾತ್ರ

ಮತದಾನದ ಹಕ್ಕನ್ನು ಯುವಜನತೆಗೆ ನೀಡಲು ಸಂವಿಧಾನದ ತಿದ್ದುಪಡಿ ತಂದಾಗ ದೇಶದ ಯುವಜನತೆಯ ಬಗ್ಗೆ ಹಿರಿಯರಿಗೆ ಅಪಾರವಾದ ಭರವಸೆ ಇತ್ತು. ಆ ಭರವಸೆ ಸಾಕಾರವಾಗುವುದು ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಕರ್ತವ್ಯ ನಿಭಾಯಿಸಿದಾಗ.

ಸಂವಿಧಾನಕ್ಕೆ ತಿದ್ದುಪಡಿ ತಂದು ಅಂದಿನ ಪ್ರಧಾನಿಯಾಗಿದ್ದ ದಿವಂಗತ ರಾಜೀವ್ ಗಾಂಧಿಯವರು ಸುಮಾರು 45 ಶೇಕಡಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ 18 ರಿಂದ 30ವರ್ಷ ವಯಸ್ಸಿನವರೆಗಿನ ಯುವಕರಿಗೆ ಮತದಾನದ ಹಕ್ಕನ್ನು ನೀಡಬೇಕು ಎಂದರು ಹಾಗೂ ಮತದಾನದ ಹಕ್ಕನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಲಾಯಿತು. ದೇಶದ ಆಗುಹೋಗುಗಳಲ್ಲಿ ಪ್ರತಿಯೊಬ್ಬ ಯುವಕ-ಯುವತಿಯರು ತನ್ನ ಪಾತ್ರವನ್ನು ವಹಿಸಬೇಕು. ಜನ ಪ್ರತಿನಿಧಿಗಳನ್ನು ಸಂವಿಧಾನದ ಆಶಯದಂತೆ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಾಲುಗೊಳ್ಳಲು, ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದಲ್ಲಿ ಮಹತ್ವದ ಸಂವಿಧಾನದ ಹಕ್ಕನ್ನು ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ನೀಡಲಾಗಿದೆ.

ಪ್ರಜಾಪ್ರಭುತ್ವದಲ್ಲಿ ದೇಶದ ರಾಷ್ಟ್ರಧ್ಯಕ್ಷರಿಗೂ ಒಂದೇ ಮತ. 18 ವರ್ಷ ತುಂಬಿದ ಶಾಲಾ-ಕಾಲೇಜುಗಳ ಯುವಕ-ಯುವತಿಯರಿಗೆ ಒಂದೇ ಮತ ನೀಡುವ ಹಕ್ಕು ಕಲ್ಪಿಸಲಾಗಿದೆ. ನಮ್ಮ ದೇಶದ ಪ್ರಜಾಪ್ರಭುತ್ವದ ವೈಶಿಷ್ಟ್ಯವೆಂದರೆ ಒಂದು ಮತವೂ ದೇಶದ ಆಡಳಿತವನ್ನೇ ಬದಲಾಯಿಸಬಹುದು. ಅದಕ್ಕೆ ಪೂರಕವಾದ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿವೆ. ಚಾಮರಾಜನಗರ ವಿಧಾನಸಭಾ ಚುನಾವಣೆಯಲ್ಲಿ ಧ್ರುವ ನಾರಾಯಣ ಅವರು ಒಂದು ಮತದಲ್ಲಿ ಗೆದ್ದು ಶಾಸಕರಾದರು. ಅಂದಿನ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಇವರು ಒಂದು ಮತದ ಅಂತರದಿಂದ ಅಧಿಕಾರವನ್ನು ಕಳೆದುಕೊಂಡರು.

ಅಂದರೆ ಪ್ರತಿ ಒಂದು ಮತವು ದೇಶದ ಶಾಸಕತ್ವದಲ್ಲಿ ತನ್ನದೇ ಆದ ಬದಲಾವಣೆ ಮಾಡಲ್ಲದು ಎಂದು ನಾವು ತಿಳಿದುಕೊಳ್ಳಬೇಕಾಗಿದೆ. ಒಂದು ಮತದ ಶಕ್ತಿ ಎಷ್ಟೆಂದರೆ ಅದು ಸರಿಸಮಾನ 130 ಕೋಟಿ ಜನರ ಶಕ್ತಿ. ಒಂದು ಮತದ ಶಕ್ತಿ ಶಾಸಕರ ಜೀವನದಲ್ಲಿ 2 ಲಕ್ಷಕ್ಕೆ ಸಮಾನ. ಹಾಗಾಗಿ ನನ್ನ ಒಂದು ಮತದಲ್ಲಿ ಏನಾಗುತ್ತದೆ ಎಂಬ ವಾದ ತೀರಾ ಹುರುಳಿಲ್ಲದ್ದು. ರಾಜಕೀಯ ಕ್ಷೇತ್ರದ ಅರಿವಿದ್ದವರು, ಜವಾಬ್ದಾರಿಯುತ ಪ್ರಜೆಗಳು ಅಂತಹ ಉಡಾಫೆಯ ಮಾತನ್ನು ಆಡಲಾರರು. ಒಂದು ಮತದಿಂದ ದೇಶವನ್ನು ಕಟ್ಟಬಹುದು. ಹಾಗೆಯೇ ಒಂದು ಮತದಿಂದ ದೇಶದ ಅಭಿವೃದ್ಧಿ ಗತಿಯನ್ನೇ ತಿರುವು ಮುರುವು ಮಾಡಬಹುದು. ಚುನಾವಣೆಯ ಅಭ್ಯರ್ಥಿ ಒಂದೇ ಮತದ ಅಂತರದಲ್ಲಿ ಅಧಿಕಾರವನ್ನು ಕಳೆದುಕೊಳ್ಳಬಹುದು ಅಲ್ವೆ. ಆದ್ದರಿಂದಲೇ ಮತ ಚಲಾವಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೆಂದು ತಿಳಿಯಬೇಕಾದ ಅವಶ್ಯಕತೆ ಇದೆ.

ನಮ್ಮ ದೇಶ ಅನೇಕ ಭಾಷೆ ಸಂಸ್ಕೃತಿ ವೈವಿಧ್ಯತೆಗಳಿಂದ ಕೂಡಿದ ರಾಷ್ಟ್ರವಾಗಿದೆ. ಎಲ್ಲಾ ವೈವಿಧ್ಯತೆ ಮತ್ತು ಭಾಷೆಗಳ ನಡುವೆಯೂ ಜನ ಪ್ರತಿನಿಧಿಗಳನ್ನು ಚುನಾಯಿಸಿ, ತಮ್ಮ ಆಶಯದಂತೆ ಕಾರ್ಯನಿರ್ವಹಿಸುವಂತೆ ಮಾಡುವ ಹಕ್ಕು ಮತ್ತು ದೇಶದ ಬೆಳವಣಿಗೆಗೆ ಪಾತ್ರರಾಗುವಂತೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಇಂದಿನ ಯುವಜನತೆಗೆ ಇದೆ. ಆದ್ದರಿಂದಲೇ ಅವರು ಕಡ್ಡಾಯವಾಗಿ ಮತದಾನ ಮಾಡಬೇಕಾದ ಅವಶ್ಯಕತೆ ಇದೆ.

ಮತದಾನ ಮಾಡದೆ ಇರಲು ಕೆಲವು ಕಾರಣಗಳನ್ನು ನೀಡುವುದು ನನ್ನ ಗಮನಕ್ಕೆ ಬಂದಿದೆ. ಕೆಲವೊಂದು ಬಾರಿ ತಾನು ಮತ ನೀಡಬೇಕೆಂದು ಬಯಸುವ ಅಭ್ಯರ್ಥಿ/ಪಕ್ಷಗಳು ಚುನಾಯಿತರಾಗಲು ಅರ್ಹತೆಯೇ ಪಡೆದಿಲ್ಲ ಎಂದು ಭಾವಿಸುವವರಿಗೆ ‘ನೋಟಾ’ ಅಂದರೆ ‘ಯಾರೂ ಸಮ್ಮತವಲ್ಲ’ಎಂಬ ಹೊಸ ಅವಕಾಶವನ್ನು ಮಾಡಿಕೊಡಲಾಗಿದೆ. ನನ್ನ ಅನಿಸಿಕೆಯಂತೆ ‘ನೋಟಾ’ ಮತ ಚಲಾಯಿಸಿದ ಒಟ್ಟು ಮತಗಳಿಗೆ ಎಲ್ಲಿಯಾದರೂ ಒಂದು ಕಡೆ ಸಂವಿಧಾನಿಕ ಬೆಲೆಯನ್ನು ನೀಡಬೇಕಾಗುತ್ತದೆ. ಈ ಬಗ್ಗೆ ಇನ್ನಷ್ಟು ವಿಸ್ತಾರವಾದ ಚರ್ಚೆಯ ಅವಶ್ಯಕತೆ ಇದೆ. ನಿರ್ದಿಷ್ಟ ಸಂಖ್ಯೆಯ ‘ನೋಟಾ’ ಮತಗಳ ಚಲಾವಣೆ ಆದರೆ ಆ ದೇಶದ ಅಭಿವೃದ್ಧಿ ಸಾಧ್ಯವೇ? ಆ ಪ್ರದೇಶದಲ್ಲಿ ಚುನಾಯಿತನಾದ ಅಭ್ಯರ್ಥಿಗೆ ಒಂದು ಮಾನದಂಡವನ್ನು ನಿಗದಿಪಡಿಸಬೇಕಾಗುತ್ತದೆ. ಈ ಬಗ್ಗೆ ಸಂವಿಧಾನ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ. ಅದಕ್ಕೆ ಮುನ್ನ ಸಂವಾದ ನಡೆಯಬೇಕಾಗಿದೆ.

ಯುವ ಮಿತ್ರರಲ್ಲಿ ನನ್ನ ವಿನಂತಿಯೇನೆಂದರೆ, ಮತ ಚಲಾಯಿಸುವುದು ನಿಮಗೆ ನೀಡಿದ ಸಂವಿಧಾನದ ಹಕ್ಕು. ಯಾವುದೇ ಕಾರಣಕ್ಕೂ ಅಸಡ್ಡೆ ತೋರಿಸುವುದು ಸರಿಯಲ್ಲ. ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನೀಡುವ ಅತ್ಯಂತ ಮಹತ್ವದ ಹಕ್ಕು ಮತ ನೀಡುವ ಹಕ್ಕು. ಮತ ಚಲಾಯಿಸಿದಾಗಲೇ ದೇಶದ ಪ್ರಜಾಪ್ರಭುತ್ವದಲ್ಲಿ ಭಾಗವಹಿಸಿದ ಹೆಮ್ಮೆ ನಮಗೆ ಇರುವುದು. ದೇಶದ ಬಗ್ಗೆ ಮಾತನಾಡುವ ಸ್ವಾತಂತ್ರ್ಯ ದೊರೆಯುವುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೊಂದಾಯಿತ ಮತದಾರರಾದ ಯುವಜನತೆ ಮುಂದೆ ಒಂದು ಹೊಸ ಸವಾಲು ಇದೆ. ಈ ಸವಾಲನ್ನು ಸ್ವೀಕರಿಸಿ ಮತ್ತು ಒಳ್ಳೆಯ ಸರ್ಕಾರ ಆಯ್ಕೆ ಮಾಡುವ ಹಕ್ಕನ್ನು ಚಲಾಯಿಸಲು ಮರೆಯಬಾರದು.

ಐವನ್ ಡಿಸೋಜ
(ಲೇಖಕರು ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT