ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹುಷಾರ್’ಗೆ ಸತೀಶ್ ರಾಜ್ ಆ್ಯಕ್ಷನ್‌ ಕಟ್‌

Last Updated 1 ನವೆಂಬರ್ 2020, 8:08 IST
ಅಕ್ಷರ ಗಾತ್ರ

ಕಳೆದ ಮೂರು ದಶಕಗಳಿಂದ ಸಿನಿಮಾ, ಕಿರುತೆರೆ ಸೇರಿ ಬಣ್ಣದ ಲೋಕದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ ಸತೀಶ್ ರಾಜ್ ‘ಹುಷಾರ್’ ಸಿನಿಮಾ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನಡೆದಿದೆ. ಬಹುತೇಕ ಹೊಸಬರೇ ಇರುವ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಭಗವಾನ್ ಮತ್ತು ಎನ್.ಎಂ ಸುರೇಶ್ ಕ್ಲಾಪ್ ಮಾಡಿ, ಶುಭ ಹಾರೈಸಿದ್ದಾರೆ.

‘ಸಿನಿಮಾ, ಕಿರುತೆರೆ, ನಾಟಕದಲ್ಲಿ ನಟಿಸಿದ್ದೇನೆ. ಇದೀಗ ನಿರ್ದೇಶನ ಮತ್ತು ನಿರ್ಮಾಣಕ್ಕಿಳಿದಿದ್ದೇನೆ. ಸತೀಶ್ ರಾಜ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಸಾಮಾಜಿಕ ಕಳಕಳಿಯ ಸಂದೇಶದ ಚಿತ್ರವಿದು. ಹಳ್ಳಿಗಾಡಿನಲ್ಲಿ ನಡೆಯುವ ಕಥೆ ಇದು. ಸಾಮಾಜಿಕ ಜವಾಬ್ದಾರಿಯುಳ್ಳ ಯುವಕ ಹೇಗೆ ಬದಲಾವಣೆಗೆ ನಾಂದಿ ಹಾಡುತ್ತಾನೆ ಎಂಬುದೇ ಹುಷಾರು ಚಿತ್ರ ಒಂದೆಳೆ’ ಎಂದು ಮಾಹಿತಿ ನೀಡುತ್ತಾರೆ ಸತೀಶ್‌.

‘ನಾವು ಏನೇ ಮಾಡುವಾಗ ಹುಷಾರಪ್ಪ, ಹುಷಾರು ಕಣೋ ಎಂದು ಹೇಳೇ ಹೇಳುತ್ತೇವೆ. ಆ ಒಂದು ಭಾವವನ್ನೇ ಈ ಸಿನಿಮಾದಲ್ಲಿ ತುಂಬಿದ್ದೇವೆ. ನಮ್ಮ ಸುತ್ತಲಿನವರೇ ಮಾಡುವ ಕೆಲಸಗಳು, ಹೇಗೆ ಸಮಾಜಕ್ಕೆ ಕಂಟಕವಾಗುತ್ತವೆ. ಆ ಎಚ್ಚರಿಕೆ ಸಂದೇಶವನ್ನೇ ನಾವಿಲ್ಲಿ ಹೇಳಹೊರಟಿದ್ದೇವೆ’ ಎಂಬುದು ಅವರ ಮಾತು.

ಈಗಾಗಲೇ ಏಳೆಂಟು ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ಮಹೇಶ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ‘ಇಲ್ಲಿಯವರೆಗೂ ಎಲ್ಲ ಬಗೆಯ ಸಿನಿಮಾಗಳಲ್ಲಿ ನಟಿಸಿದ್ದೇನೆ. ಗ್ರಾಮೀಣ ಸೊಗಡಿನ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಆ ಅವಕಾಶ ಸಿಕ್ಕಿದೆ. ಕಾಮಿಡಿ ಎಳೆಯಿಂದ ಶುರುವಾಗುವ ಕಥೆ, ನಿಧಾನಕ್ಕೆ ಹಾರರ್ ಅವತಾರ ತಾಳುತ್ತದೆ. ಒಂದಾದ ಮೇಲೊಂದರಂತೆ ಟ್ವಿಸ್ಟ್‌ಗಳು ಎದುರಾಗುತ್ತವೆ. ಕಮರ್ಷಿಯಲ್ ಅಂಶಗಳೂ ಸಿನಿಮಾದಲ್ಲಿರಲಿವೆ’ ಎಂಬುದು ವಿಜಯ್ ಮಹೇಶ್ ಮಾತು.

‘ಸೇಡು’, ‘ಜಲ್ಲಿಕಟ್ಟು’ ಹಾಗೂ ‘ಅಂದುಕೊಂಡಂತಲ್ಲ ಜೀವನ’ ಸಿನಿಮಾಗಳಲ್ಲಿ ನಟಿಸಿರುವ ನಟಿ ಸುಲಕ್ಷಾ ಕೈರ, ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

‘ತುಂಬಾ ಸಾಂಪ್ರದಾಯಿಕ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ನನ್ನದು ಶಿಕ್ಷಕಿಯ ಪಾತ್ರ. ಪ್ರತಿಯೊಂದು ಕ್ಷಣದಲ್ಲಿ ಏನಾಗುತ್ತದೆ ಎಂಬ ಅರಿವು ಯಾರಿಗೂ ಇರಲ್ಲ. ನಮ್ಮ ಹುಷಾರಲ್ಲಿ ನಾವಿರಬೇಕು ಎಂಬುದೇ ಈ ಚಿತ್ರದ ಸಾರ. ಲವ್, ಹಾರರ್, ಕಾಮಿಡಿ ಎಲ್ಲ ಅಂಶಗಳೂ ಈ ಸಿನಿಮಾದಲ್ಲಿದೆ’ ಎನ್ನುವುದು ಸುಲಕ್ಷಾ ಮಾತು.

ನಟಿ ರಚನಾ ಮಲ್ನಾಡ್ ಕೊಂಚ ಬೋಲ್ಡ್ ಅವತಾರದಲ್ಲಿಯೇ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯ ತಂಗಿಯಾಗಿ ರಚನಾ ಅವರ ಪಾತ್ರ ಸಾಗಲಿದೆ. ಪೋಷಕ ಪಾತ್ರಗಳಲ್ಲಿ ಲಯ ಕೋಕಿಲ, ಗಣೇಶ್ ರಾವ್, ಪಿ. ಮೂರ್ತಿ, ಸತೀಶ್ ರಾಜ್, ಪುಷ್ಪ ಸ್ವಾಮಿ, ರತ್ನಮಾಲ, ಮೂಗು ಸುರೇಶ್, ಪ್ರಶಾಂತ್ ನಟನ, ವೆಂಕಟೇಶ್ ಹೇರೊಹಳ್ಳಿ, ವಸಂತ್ ಕುಮಾರ್‌ ತಾರಾಗಣವಿದೆ.

ನವೆಂಬರ್ ಎರಡನೇ ವಾರದಲ್ಲಿ ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿ ಹಲವೆಡೆ 25 ದಿನ ಚಿತ್ರೀಕರಣ ನಡೆಯಲಿದೆ. 10 ದಿನಗಳಲ್ಲಿ ಗೋವಾ ಸುತ್ತಮುತ್ತ ನಾಲ್ಕು ಹಾಡಿನ ಶೂಟಿಂಗ್ ಮಾಡಿಕೊಳ್ಳುವ ಯೋಜನೆ ಚಿತ್ರತಂಡದ್ದು.

ಪೂರ್ಣಚಂದ್ರ ಛಾಯಾಗ್ರಹಣ, ಎಸ್. ನಾಗು ಸಂಗೀತ, ಜೆ.ಜೆ. ಶರ್ಮಾ ಸಂಕಲನ, ಅಕುಲ್ ಎಸ್. ನೃತ್ಯ ನಿರ್ದೇಶನ, ಚಂದ್ರು ಬಂಡೆ ಸಾಹಸ ನಿರ್ದೇಶನ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT