ರಾಷ್ಟ್ರ ಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾ ನಿರ್ದೇಶಿಸಿದ್ದ ಸಾಗರ್ ಪುರಾಣಿಕ್ ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ‘ವೆಂಕ್ಯಾ’ ಎಂಬ ಸಿನಿಮಾಗೆ ಸಾಗರ್ ಪುರಾಣಿಕ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಸಾಗರ್ ನಟನೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
‘ಡೊಳ್ಳು’ ಸಿನಿಮಾ ನಿರ್ಮಾಣ ಮಾಡಿದ್ದ ಪವನ್ ಒಡೆಯರ್ ಅವರೇ ‘ವೆಂಕ್ಯಾ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನಡೆಯಿತು. ‘ವೆಂಕ್ಯಾ’ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ ಎಂದಿದೆ ಚಿತ್ರತಂಡ. ಉತ್ತರ ಕರ್ನಾಟಕದ ಕಥೆಯಾದರೂ ಅದು ದೇಶವೆಲ್ಲ ಸುತ್ತಲಿದೆ. ಇದೊಂದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ ಎಂದಿದೆ ತಂಡ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಸಾಗರ್ ತಿಳಿಸಿದ್ದಾರೆ.