ಬೋಲ್ಡ್ ನಟನೆ, ರಗಡ್ ಲುಕ್ ಹಾಗೂ ಲಿಪ್ಕಿಸ್ನ ಮೂಲಕ ‘ಟಾಲಿವುಡ್ನ ಇಮ್ರಾನ್ ಹಶ್ಮಿ’ ಎಂದೇ ಖ್ಯಾತಿ ಗಳಿಸಿದ ನಟ ವಿಜಯ್ ದೇವರಕೊಂಡ. ‘ಪೆಳ್ಳಿ ಚೂಪುಲು’ ಸಿನಿಮಾದ ಮೂಲಕ ನಾಯಕನಾಗಿ ವೃತ್ತಿ ಜೀವನ ಆರಂಭಿಸಿದ ಈ ನಟ ಹೆಸರಾಗಿದ್ದು ‘ಅರ್ಜುನ್ ರೆಡ್ಡಿ’ ಸಿನಿಮಾದ ಮೂಲಕ.
ಸದಾ ಬೋಲ್ಡ್ ಮಾತಿನಿಂದಲೇ ಹೆಸರು ಗಳಿಸಿರುವ ದೇವರಕೊಂಡ ಇದೇ ಮೊದಲ ಬಾರಿ ವೇದಿಕೆಯ ಮೇಲೆ ಅತ್ತಿದ್ದಾರೆ! ಅರ್ಜುನ್ ರೆಡ್ಡಿ ಅಳೋದಾ?
ವಿಜಯ್ ದೇವರಕೊಂಡ ನಿಜವಾಗಿಯೂ ಅತ್ತಿದ್ದಾರೆ. ತಮ್ಮ ಸಹೋದರ ಆನಂದ್ ದೇವರಕೊಂಡ ಅವರ ಚೊಚ್ಚಲ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಅವರ ಕಣ್ಣುಗಳು ನಿಜವಾಗಲು ಹಸಿಗೊಂಡಿದ್ದವು.
ಆನಂದ್ ದೇವರಕೊಂಡ ‘ದೊರಸಾನಿ’ ಸಿನಿಮಾದ ಮೂಲಕ ಟಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನಟ ರಾಜಶೇಖರ್ ಅವರ ಪುತ್ರಿ ಶಿವತ್ಮಿಕ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಮ್ಮನ ಬಗ್ಗೆ ಮಾತನಾಡಿ ಭಾವುಕರಾದ ವಿಜಯ್ ‘ನನ್ನ ತಮ್ಮ ಆನಂದ್ ಅಮೆರಿಕದಲ್ಲಿ ಎಂಜಿನಿಯರ್ ಆಗಿದ್ದ. ಅವನು ಚೆನ್ನಾಗಿ ಸಂಪಾದಿಸುತ್ತಿದ್ದ. ಅವನ ಗಳಿಕೆಯಿಂದಲೇ ಮನೆ ನಡೆಯುತ್ತಿತ್ತು. ನನ್ನ ನಟನೆಯ ಕನಸಿಗೂ ಅವನು ಬೆಂಬಲ ನೀಡಿದ್ದ. ನಾನು ಇಂದು ಈ ಸ್ಥಾನದಲ್ಲಿರಲು ಅವನೇ ಕಾರಣ’ ಎನ್ನುವಾಗ ಅವರು ಗದ್ಗದಿತರಾದರು. ಅವರ ಕಣ್ಣುಗಳಲ್ಲಿ ನೀರಿತ್ತು.
ನಾನು ಹಿರಿಯ ಮಗನಾದರೂ ನನ್ನ ಮೇಲಿರುವ ಮನೆಯ ಜವಾಬ್ದಾರಿಯನ್ನು ಅವನು ವಹಿಸಿಕೊಂಡು ನನಗೆ ನಟನೆಯನ್ನು ಮುಂದುವರಿಸಲು ಸಹಾಯ ಮಾಡಿದ್ದ ಎಂದು ನೆನೆದಿದ್ದಾರೆ.
ಆನಂದ್ ಅಮೆರಿಕದಲ್ಲಿ ಕೆಲಸ ಬಿಟ್ಟು ಸಿನಿಮಾ ಮಾಡಲು ಬರುತ್ತೇನೆ ಎಂದಾಗ ವಿಜಯ್ಗೆ ಬೇಸರವಾಗಿತ್ತಂತೆ. ತನ್ನ ಬೇಸರವನ್ನು ತಮ್ಮನ ಬಳಿ ಹೇಳಿಕೊಂಡಿದ್ದರು ಕೂಡ. ಆನಂದ್ ತಮ್ಮ ನಿರ್ಧಾರ ಹೇಳಿದಾಗ ವಿಜಯ್ ‘ನಾನು ನಿನಗೆ ಸಹಾಯ ಮಾಡುವುದಿಲ್ಲ. ಒಂದು ಒಳ್ಳೆಯ ಸಿನಿಮಾ ಮಾಡಲು, ಒಂದು ಒಳ್ಳೆಯ ಕಥೆ ಸಿಗಲು ಈ ಇಂಡಸ್ಟ್ರಿಯಲ್ಲಿ ಎಷ್ಟು ಕಷ್ಟ ಪಡಬೇಕು ಎಂಬುದು ನಿನಗೂ ಅರ್ಥವಾಗಬೇಕು. ಹಾಗಾಗಿ ನೀನಾಗಿಯೇ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಬೇಕು’ ಎಂದಿದ್ದರಂತೆ.
ದೊರಸಾನಿ ಪ್ರಿ ರೀಲಿಸ್ ಇವೆಂಟ್ಗೆ ವಿಜಯ್ ಅವರನ್ನು ಆಹ್ವಾನಿಸಿದಾಗ ‘ನನಗೆ ದೊರೆಸಾನಿ ಸಿನಿಮಾವನ್ನು ನೀವು ತೋರಿಸಬೇಕು. ಒಂದು ವೇಳೆ ನನಗೆ ಸಿನಿಮಾ ಇಷ್ಟವಾಗದಿದ್ದರೆ ಬೇರೆ ನಟರನ್ನು ನೀವು ಆಹ್ವಾನಿಸಬೇಕಾಗಬಹುದು’ ಎಂದು ನಿರ್ಮಾಪಕರಿಗೆ ಮೊದಲೇ ತಿಳಿಸಿದ್ದರಂತೆ. ಸಿನಿಮಾ ನೋಡಿದ ಮೇಲೆ ಪಾತ್ರವರ್ಗ ಹಾಗೂ ಸಿನಿಮಾ ತಂಡದ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ ಎಂದು ವಿಜಯ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.