ಬೆಳಗಾವಿ: ಯುವರತ್ನ ಚಲನಚಿತ್ರದ ಪ್ರಚಾರಕ್ಕಾಗಿ ಇಲ್ಲಿನ ಕ್ಯಾಂಪ್ ಪ್ರದೇಶದಲ್ಲಿರುವ ಚಂದನ್ - ಐನಾಕ್ಸ್ ಚಿತ್ರಮಂದಿರ ಆವರಣದಲ್ಲಿ ಆಯೋಜಿಸಿರುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.
ಪುಷ್ಪವೃಷ್ಟಿ ಮೂಲಕ ಸಂಭ್ರಮದಿಂದ ಬರ ಮಾಡಿಕೊಂಡರು. ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟರಾದ ಧನಂಜಯ ಹಾಗೂ ರವಿಶಂಕರ್ ಗೌಡ ಅವರು ಜೊತೆಯಲ್ಲಿದ್ದರು.
ಹಾಡು, ಡೈಲಾಗ್ ಹೇಳಿ ರಂಜಿಸಿದ ಪುನೀತ್
ಯುವರತ್ನ ಚಲನಚಿತ್ರದ ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ಹಾಲಿನ ಹೊಳೆಯೊ ಜೇನಿನ ಮಳೆಯೊ ಸುಧೆಯೋ ಕನ್ನಡ ಸವಿ ನುಡಿಯೊ ಹಾಡು ಹಾಡಿ ರಂಜಿಸಿದರು.
ಅವರು ವೇದಿಕೆ ಏರುತ್ತಿದ್ದಂತೆಯೇ ಮಳೆಯ ಸಿಂಚನವಾಯಿತು. ಅಭಿಮಾನಿಗಳು ಪುಷ್ಟ ವೃಷ್ಟಿಯನ್ನೂ ಮಾಡಿದರು. ಇದನ್ನು ಗಮನಿಸಿದ ಅವರು ತಂದೆ ಡಾ.ರಾಜಕುಮಾರ ಅವರ ಹಾಡು ಹಾಡಿದರು.
ಅಭಿಮಾನಿಗಳ ಒತ್ತಾಯದ ಮೇರೆಗೆ ಯುವರತ್ನ ಚಲನಚಿತ್ರದ ಡೈಲಾಗ್ 'ಫಸ್ಟ್ ಬೆಂಚಲ್ಲಿ ಕುಂತರೆ ಬೋರ್ಡ್ ಮಾತ್ರ ಕಾಣ್ಸುತ್ತೆ, ಲಾಸ್ಟ್ ಬೆಂಚಲ್ಲಿ ಕುಂತರೆ ಇಡೀ ವರ್ಲ್ಡ್ ಕಾಣುತ್ತೆ' ಹೇಳಿ ರಂಜಿಸಿದರು.
ಕುಂದಾನಗರಿ, ರಾಣಿ ಚನ್ನಮ್ಮ, ಸಂಗೊಳ್ಳಿರಾಯಣ್ಣನ ಊರಿಗೆ ಬರುವುದಕ್ಕೆ ಖುಷಿ. ಬಂದ ಕೂಡಲೇ ಮಳೆ ಬಂತು. ಇದು ಶುಭ ಶಕುನ ಎಂದ ಅವರು ಜೈ ಕರ್ನಾಟಕ ಹಾಗೂ ಜೈ ಬೆಳಗಾವಿ ಎಂದು ಘೋಷಣೆ ಕೂಗಿದರು.
'ಜನರ ಪ್ರೀತಿ, ವಿಶ್ವಾಸ ದೊಡ್ಡದು. ನಿಮಗೋಸ್ಕರ ಚಿತ್ರದಲ್ಲಿ ಬಹಳಷ್ಟು ಡ್ಯಾನ್ಸ್ ಮಾಡಿದ್ದೇನೆ. ಏ.1ರಂದು ಬಿಡುಗಡೆಯಾಗಲಿದೆ. ನೋಡಿ ಹರಸಿ' ಎಂದು ಕೋರಿದರು