ಜುಲೈ 22 ಮಾನ್ಯತಾ ಪಾಲಿಗೆ ಸಂಜಯ್ ಇಲ್ಲದ ಮತ್ತೊಂದು ದಿನವಷ್ಟೆ. ಅದು ಮಾನ್ಯತಾ ಅವರ ಜನ್ಮದಿನ. ಜೊತೆಗಿಲ್ಲದಿದ್ದರೂ ಪತ್ನಿಗೆ ಹುಟ್ಟುಹಬ್ಬದ ಉಡುಗೊರೆ ನೀಡುವುದನ್ನು ಸಂಜು ಮರೆತಿಲ್ಲ. ಜೈಲಿನಲ್ಲಿದ್ದುಕೊಂಡೇ ಮಾನ್ಯತಾಗೆ ಜನ್ಮದಿನದ ಉಡುಗೊರೆಯನ್ನು ಕಳುಹಿಸಿದ್ದಾರೆ.
ಮುಂಬೈ ಸರಣಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಯರವಾಡ ಜೈಲಿನಲ್ಲಿ ಕಳೆದ ಎರಡು ತಿಂಗಳಿನಿಂದ ಶಿಕ್ಷೆ ಅನುಭವಿಸುತ್ತಿರುವ ನಟ ಸಂಜಯ್ ದತ್, ಮಡದಿ ಮಾನ್ಯತಾ ಅವರ ಜನ್ಮದಿನಕ್ಕೆಂದು ಕವಿತೆಯೊಂದು ಬರೆದು ಅದರೊಂದಿಗೆ ಗುಲಾಬಿ ದಳಗಳನ್ನಿಟ್ಟು ಕಳುಹಿಸಿದ ಸುದ್ದಿ ವರದಿಯಾಗಿದೆ. ಈ ಪ್ರೇಮದ ಉಡುಗೊರೆಯಿಂದ ಗದ್ಗದಿತರಾದ ಮಾನ್ಯತಾಗೆ ಸಂಜಯ್ ದತ್ ಅವರ ಆರೋಗ್ಯದ್ದೇ ಚಿಂತೆಯಂತೆ. ಕಳೆದ ಶನಿವಾರ ಸಂಜಯ್ ಅವರನ್ನು ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಸಾಮಾನ್ಯವಾಗಿ ಪ್ರತಿ ಶನಿವಾರ ಸಂಜಯ್ ಅವರ ವಕೀಲರು ಅವರನ್ನು ಭೇಟಿಯಾಗಲು ಯರವಾಡ ಜೈಲಿಗೆ ಹೋಗುತ್ತಾರೆ. ಅದರಂತೆಯೇ ಜುಲೈ 20ರಂದು ಹೋಗಿದ್ದ ವಕೀಲರ ಕೈಯಲ್ಲಿ ತಮ್ಮ ಉಡುಗೊರೆಯನ್ನು ಮಾನ್ಯತಾಗೆ ನೀಡುವಂತೆ ಸಂಜಯ್ ನೀಡಿದ್ದರಂತೆ. ಮಾನ್ಯತಾ ಕೂಡ ತಮಗೆ ಉಡುಗೊರೆ ತಲುಪಿದ್ದನ್ನು ಪತ್ರದ ಮೂಲಕ ಸಂಜಯ್ಗೆ ತಿಳಿಸಿದ್ದಾರೆ.