ಸಿನಿಮಾ ಮಾಯೆಗೆ ಮರುಳಾಗಿ ಹತ್ತು ವರ್ಷಗಳ ಹಿಂದೆ ಗಾಂಧಿನಗರದಲ್ಲಿ ಅಡಿಯಿಟ್ಟಾಗ ನವೀನ್ ಬಳಿ ನಟನಾಗಬೇಕು ಎಂಬ ಛಲದ ಹೊರತು ಇನ್ನೇನೂ ಇರಲಿಲ್ಲ. ಆಗ ಅವರ ಕೈಹಿಡಿದಿದ್ದು ರಂಗಭೂಮಿ. ರವೀಂದ್ರ ಕಲಾಕ್ಷೇತ್ರದ ಹಲವು ರಂಗತಂಡಗಳ ನಾಟಕಗಳಲ್ಲಿ ನಟಿಸುತ್ತಲೇ ಅವರು ಅಭಿನಯದ ವ್ಯಾಕರಣ ಕಲಿತುಕೊಂಡರು. ಅಲ್ಲಿ ನಟಿಸುತ್ತಲೇ ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಹೀಗೆ ಹಲವು ಭಾಷೆಗಳ ಕಿರುಚಿತ್ರಗಳಲ್ಲಿಯೂ ನಟಿಸಿದರು. ನಂತರ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಾ ಕ್ಯಾಮೆರಾ ಎದುರು ನಟಿಸುವ ಪರಿಯನ್ನು ಕಲಿತುಕೊಂಡರು. ‘ಮುಕ್ತ ಮುಕ್ತ’, ‘ಮಹಾಭಾರತ’, ‘ವಸುದೈವ ಕುಟುಂಬ’, ‘ಪಲ್ಲವಿ ಅನುಪಲ್ಲವಿ’ – ಹೀಗೆ ಹಲವು ಧಾರವಾಹಿಗಳಲ್ಲಿ ಅವರು ನಟಿಸಿದ್ದಾರೆ. ಹಾಗೆಯೇ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಅವಕಾಶವೂ ಅವರಿಗೆ ಸಿಕ್ಕಿತು. ‘ಮಂಜಿನ ಹನಿ’, ‘ಆಟ’, ‘ದುಷ್ಟ’, ‘ಒನ್ ಟೈಮ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರೂ ಮುಖ್ಯಪಾತ್ರವೊಂದನ್ನು ನಿರ್ವಹಿಸುವ ಅವಕಾಶ ಅವರ ಪಾಲಿಗೆ ಒದಗಿ ಬಂದಿರಲಿಲ್ಲ.