‘‘ಈ ಹುಡುಗ ಮೊದಲಿನಿಂದಲೂ ನನಗೆ ಆಗಾಗ ಮೆಸೇಜ್ ಮಾಡ್ತಿದ್ದ. ‘ಸರ್, ಎಲೆಕ್ಷನ್ಗೆ ಪೋಸ್ಟರ್, ಬ್ಯಾನರ್ ಏನಾದ್ರೂ ಡಿಸೈನ್ ಮಾಡಿಕೊಡಬೇಕಾ?’ ಅಂತ. ಕೆಲವು ದಿನಗಳ ಹಿಂದೆ ಫೋನ್ ಮಾಡಿ ‘ಸರ್ ನಿಮ್ಮನ್ನು ಭೇಟಿ ಮಾಡಿ ಮಾತಾಡ್ಬೇಕಿತ್ತು’ ಎಂದ.
ನಾನು ಏನೋ ಬ್ಯಾನರ್ ವಿಷಯವನ್ನೇ ಮಾತಾಡ್ತಾನೆ ಅಂದ್ಕೊಂಡೆ. ಆದ್ರೆ ಅವನು ‘ನಾವೊಂದು ಸಿನಿಮಾ ಮಾಡ್ತಿದ್ದೀವಿ. ನೀವು ನಟಿಸಬೇಕು’ ಅಂತ ಕೇಳಿದ. ನನಗೆ ಆಶ್ಚರ್ಯ ಸಂತೋಷ ಎರಡೂ ಆಯ್ತು.’’
ನಟ ಬಿ.ಸಿ. ಪಾಟೀಲ್ ಮೈಕ್ ಹಿಡಿದುಕೊಂಡು ಹೀಗೆ ಕಥೆ ಹೇಳುತ್ತಿದ್ದರೆ ಪಕ್ಕ ನಿಂತಿದ್ದ ಗೌರಿ ಶಿಖರ್ ನಿಂತಲ್ಲೇ ನಾಚಿಕೊಳ್ಳುತ್ತಿದ್ದರು. ಪಾಟೀಲ್ ಮಾತನಾಡುತ್ತಿದ್ದದ್ದು ‘ರಾಜಹಂಸ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ.
ಚಿತ್ರತಂಡದ ಎಲ್ಲರೂ ಧೋತಿ ಉಟ್ಟುಕೊಂಡು ಅತ್ತಿಂದಿತ್ತ ಸಂಭ್ರಮದಲ್ಲಿ ಓಡಾಡುತ್ತಿದ್ದರು. ಅದೇ ಯೂನಿಫಾರ್ಮಿನಲ್ಲಿದ್ದ ನಾಯಕ ಗೌರಿ ಶಿಖರ್ ಮುಖದಲ್ಲಿ ಹಬ್ಬದ ಖುಷಿ ಎದ್ದು ಕಾಣುತ್ತಿತ್ತು. ‘ಜನಮನ ಸಿನಿಮಾ’ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಗೌರಿ ಶಿಖರ್
‘ರಾಜಹಂಸ’ದ ನಡಿಗೆಯನ್ನು ಜಡೇಶ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಅವರಿಗಿದು ಮೊದಲ ಸಿನಿಮಾ. ಚಿತ್ರದ ಬಗ್ಗೆ ಮಾಹಿತಿ ನೀಡಿದ ಗೌರಿ ಶಿಖರ್, ‘ಒಳ್ಳೆಯ ಸಿನಿಮಾ ಆಗಲು ಬೇಕಾದ ಎಲ್ಲ ಅಂಶಗಳೂ ‘ರಾಜಹಂಸ’ದಲ್ಲಿವೆ’ ಎಂದರು. ಇದು ರಾಜ ಎಂಬ ಹೆಸರಿನ ಶ್ರೀಮಂತ ಹುಡುಗನ ಸುತ್ತ ಹೆಣೆದ ಕಥೆ. ಈ ರಾಜನಿಗೆ ಹಂಸಾಕ್ಷಿಯಾಗಿ ರಂಜನಿ ರಾಘವನ್ ತೆರೆ ಹಂಚಿಕೊಳ್ಳಲಿದ್ದಾರೆ.
‘ರಾಜಹಂಸದ ಎದುರಿಗೆ ನೀರು ಮಿಶ್ರಿತ ಹಾಲಿಟ್ಟರೆ, ಅದು ಹಾಲನ್ನಷ್ಟೇ ಕುಡಿದು ನೀರನ್ನು ಹಾಗೇ ಬಿಡುತ್ತದಂತೆ. ಈ ರಾಜಹಂಸವೂ ಹಾಗೆ. ಜೀವನದಲ್ಲಿ ಎದುರಾಗುವ ಕಹಿಗಳನ್ನು ಬಿಟ್ಟು ಸಿಹಿಯನ್ನಷ್ಟೇ ಉಳಿಸಿಕೊಳ್ಳುವ ಕಥೆ’ ಎಂದು ಗೌರಿ ಶಿಖರ್ ವಿವರಿಸಿದರು. ಗೌರಿಶಂಕರ್ ಎಂದಿದ್ದ ತಮ್ಮ ಹೆಸರನ್ನು ಅವರು ನಿರ್ದೇಶಕರ ಸಲಹೆಯ ಮೇರೆಗೆ ಗೌರಿ ಶಿಖರ್ ಎಂದು ಬದಲಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಆರು ಹಾಡುಗಳಿವೆ. ಜೋಶ್ವಾ ಶ್ರೀಧರ್ ಹಾಕಿರುವ ಟ್ಯೂನ್ಗಳಿಗೆ ಧನಂಜಯ ದಿಡಿಗ ಅಕ್ಷರಗಳನ್ನು ಪೋಣಿಸಿದ್ದಾರೆ. ರಂಜನಿ ರಾಘವನ್ ಈ ಚಿತ್ರದ ಮೂಲಕ ನಾಯಕ ನಟಿಯಾಗಿ ಪದಾರ್ಪಣೆ ಮಾಡುತ್ತಿರುವುದರ ಜತೆಗೆ ಒಂದು ಹಾಡಿಗೆ ಧ್ವನಿಯಾಗಿದ್ದಾರೆ ಕೂಡ.
ಸುಧಾಕರ್ ಶೆಟ್ಟಿ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ, ಬಿ.ಸಿ. ಪಾಟೀಲ್, ಶ್ರೀಧರ್ ತಬಲಾ ನಾಣಿ, ಬುಲೆಟ್ ಪ್ರಕಾಶ್, ವಿಜಯ ಚೆಂಡೂರು, ರಾಜು ತಾಳಿಕೋಟೆ, ಯಮುನಾ ಮುಂತಾದವರ ತಾರಾಗಣವಿದೆ. ಆಗಸ್ಟ್ನಲ್ಲಿ ತೆರೆಗೆ ತರುವ ಆಲೋಚನೆ ಚಿತ್ರತಂಡದ್ದು.
ಬಿ.ಸಿ. ಪಾಟೀಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.