ನಟಿ ಅಮೂಲ್ಯ ಹಾಗೂ ನಟ ಪ್ರೇಮ್ ಅವರು ಕಪ್ಪುಸುಂದರಿಯನ್ನು ಕೈಯಲ್ಲಿ ಹಿಡಿದಿದ್ದರು. ಫಿಲಂಫೇರ್ ಪ್ರಶಸ್ತಿಗೆ ಪಾತ್ರವಾಗಿರುವ ಈ ಜೋಡಿಯನ್ನು ಅಭಿನಂದಿಸಲೆಂದೇ ತೇಜಸ್ ನಿರ್ದೇಶನದ ‘ಮಳೆ’ ಚಿತ್ರತಂಡ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು.
‘ಚಾರ್ಮಿನಾರ್‘ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ಪ್ರೇಮ್ ಅವರಿಗೆ, ಪ್ರಶಸ್ತಿಯಿಂದಾಗಿ ತಮ್ಮ ಜವಾಬ್ದಾರಿ ಹೆಚ್ಚಿದೆ ಎನ್ನುವ ಅನಿಸಿಕೆ. ‘ಮುಂದೆ ಇನ್ನೂ ಹೆಚ್ಚಿನ ಹೊಣೆಗಾರಿಕೆಯಿಂದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಚಾರ್ಮಿನಾರ್ ಎಂದರೆ ನಾಲ್ಕು ಕಂಬಗಳು. ನಾನು ಈ ಪ್ರಶಸ್ತಿಯನ್ನು ನನ್ನ ಜೀವನದ ನಾಲ್ಕು ಕಂಬಗಳಾದ ಹೆತ್ತವರು, ಗುರುಗಳು, ಪ್ರೇಕ್ಷಕರು ಹಾಗೂ ಅಭಿಮಾನಿಗಳಿಗೆ ಅರ್ಪಿಸುವೆ’ ಎಂದು ಹೇಳಿದರು.
ಅಮೂಲ್ಯ ಅವರಿಗೆ ಪ್ರಶಸ್ತಿ ದೊರೆತಿರುವುದು ‘ಶ್ರಾವಣಿ ಸುಬ್ರಮಣ್ಯ’ ಚಿತ್ರದ ಪಾತ್ರಕ್ಕಾಗಿ. ‘ನಾನು ಸೋತಾಗಲೂ, ಗೆದ್ದಾಗಲೂ ನನ್ನ ಕುಟುಂಬದವರಂತೆಯೇ ನನ್ನನ್ನು ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ತುಂಬ ಥ್ಯಾಂಕ್ಸ್’ ಎಂದರು ಅಮೂಲ್ಯ. ‘ಮಳೆ’ ಚಿತ್ರದ ಬಗ್ಗೆ ಮಾತನಾಡಿದ ಅಮೂಲ್ಯ ‘ಈ ಚಿತ್ರದಲ್ಲಿ ನನ್ನದು ಬಜಾರಿ ಪಾತ್ರ’ ಎಂದರು.
ಪ್ರೇಮ್, ಅಮೂಲ್ಯ ಅವರಿಗೆ ಅಭಿನಂದಿಸಿದ ಮಳೆ ಚಿತ್ರದ ನಿರ್ದೇಶಕ ತೇಜಸ್, ‘ಮಳೆ ಚಿತ್ರದ ಚಿತ್ರೀಕರಣ ಶೇ 60 ಭಾಗ ಮುಗಿದಿದೆ. ಉಳಿದ ಭಾಗದ ಚಿತ್ರೀಕರಣಕ್ಕೆ ಮಳೆಗಾಗಿ ಕಾಯುತ್ತಿದ್ದೆವು. ಈಗ ಮಳೆ ಆರಂಭವಾಗಿದೆ. ಚಿತ್ರೀಕರಣ ಪೂರ್ಣಗೊಳಿಸಲು ಸಕಲೇಶಪುರಕ್ಕೆ ಹೊರಡುತ್ತಿದ್ದೇವೆ’ ಎಂದರು.
‘ಮಳೆ’ ಚಿತ್ರದ ಛಾಯಾಗ್ರಾಹಕ ಜ್ಞಾನಮೂರ್ತಿ, ಕಾರ್ಯಕಾರಿ ನಿರ್ಮಾಪಕ ಮುನೀಂದ್ರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.