ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಬ್‌ ಅವಧಿ: ಹೋರಾಟದ ಎಚ್ಚರಿಕೆ

ಬೆಳಗ್ಗೆ 10ರಿಂದ ರಾತ್ರಿ 11ರವರೆಗೆ ವೇಳೆ ಸೀಮಿತ
Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಬ್, ಕೆಫೆ, ಬಾರ್‌ ಅಂಡ್‌ ರೆಸ್ಟೊರೆಂಟ್, ಐಷಾರಾಮಿ ಹೋಟೆಲ್‌ಗಳ ವಹಿವಾಟು ಅವಧಿಯನ್ನು ನಿತ್ಯವೂ ಬೆಳಿಗ್ಗೆ 10ರಿಂದ ರಾತ್ರಿ 11 ಗಂಟೆಗೆ ಸೀಮಿತಗೊಳಿಸಬೇಕು’ ಎಂಬ ತಜ್ಞರ ಸಮಿತಿಯ ಶಿಫಾರಸಿಗೆ ಪರ– ವಿರೋಧ ವ್ಯಕ್ತವಾಗಿದೆ.

ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಹಾಗೂ ಅತ್ಯಾಚಾರ ತಡೆ ಸಂಬಂಧ ಅಧ್ಯಯನ ನಡೆಸಿದ್ದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ನೇತೃತ್ವದ ತಜ್ಞರ ಸಮಿತಿ  ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶುಕ್ರವಾರ ತನ್ನ ವರದಿ ನೀಡಿದೆ. ಅದರಲ್ಲಿ ವಹಿವಾಟು ಅವಧಿ ಬಗ್ಗೆ ಪ್ರಸ್ತಾಪಿಸಲಾಗಿದೆ.

‘ರಾಜಧಾನಿ ಹಾಗೂ ಇತರೆ ನಗರಗಳಲ್ಲಿರುವ, ಮೋಜು–ಮಸ್ತಿ ನಡೆಸುವ ಪಬ್, ಕೆಫೆ, ಬಾರ್‌ ಅಂಡ್‌ ರೆಸ್ಟೊರೆಂಟ್, ಐಷಾರಾಮಿ ಹೋಟೆಲ್‌ಗಳ ಮೇಲೆ 24 ಗಂಟೆಯೂ ಪೊಲೀಸರು ನಿಗಾವಹಿಸಬೇಕು. ಬೆಳಿಗ್ಗೆ 10ರಿಂದ ರಾತ್ರಿ 11 ಗಂಟೆಯವರೆಗೆ ಮಾತ್ರ ವಹಿವಾಟು ನಡೆಸಲು ಅವುಗಳಿಗೆ ಅವಕಾಶ ನೀಡ
ಬೇಕು. ಅಂಥ ಸ್ಥಳಗಳಿಗೆ ಭೇಟಿ ನೀಡುವ ಜನರ ರಕ್ಷಣೆ ಜವಾಬ್ದಾರಿಯನ್ನು ಆಯಾ ಕೇಂದ್ರಗಳ ಮಾಲೀಕರಿಗೆ ನೀಡಬೇಕು. ಯಾವುದೇ ಅಹಿತಕರ ಘಟನೆಗಳು ನಡೆದರೆ, ಕೇಂದ್ರಗಳ ಪರವಾನಗಿ ರದ್ದುಪಡಿಸಬೇಕು. ಅಪರಾಧ ಎಸಗಿದ್ದರೆ, ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಶಿಫಾರಸನ್ನು ನಗರದ ನಿವಾಸಿಗಳ ಒಕ್ಕೂಟಗಳು ಸ್ವಾಗತಿಸಿವೆ. ಪಬ್, ಕೆಫೆ,ಬಾರ್‌ ಅಂಡ್‌ ರೆಸ್ಟೊರೆಂಟ್, ಐಷಾರಾಮಿ ಹೋಟೆಲ್‌ಗಳ ಮಾಲೀಕರು, ಹಲವು ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದಾರೆ.

‘ನಗರದಲ್ಲಿ 5 ಸಾವಿರ ಹೋಟೆಲ್‌ಗಳಿವೆ. ಮೆಜೆಸ್ಟಿಕ್‌ ನಿಲ್ದಾಣ ಸುತ್ತಮುತ್ತ 6 ಕಿ.ಮೀ ವ್ಯಾಪ್ತಿಯಲ್ಲಿ 24 ಗಂಟೆಯೂ ದರ್ಶಿನಿ ತೆರೆಯಲು ಅನುಮತಿ ಪಡೆದಿ
ದ್ದೇವೆ. ಉಳಿದೆಡೆ ರಾತ್ರಿ 1 ಗಂಟೆವರೆಗೆ ವಹಿವಾಟಿಗೆ ಅವಕಾಶವಿದೆ. ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳನ್ನು ರಾತ್ರಿ 11 ಗಂಟೆಯವರೆಗೆ ತೆರೆಯಬಹುದಾಗಿದೆ. ಭಾನುವಾರ ಹಾಗೂ ಶನಿವಾರ ರಾತ್ರಿ 1 ಗಂಟೆವರೆಗೆ ತೆರೆಯಲು ಅವಕಾಶ ಇದೆ’ ಎಂದರು.

‘ವಹಿವಾಟು ಅವಧಿ ಸಂಬಂಧ ವಿಕಾಸಸೌಧದಲ್ಲಿ ಈ ಹಿಂದೆ ಸಭೆ ನಡೆದಿತ್ತು. ಆ ನಂತರ, ಸರ್ಕಾರವೇ ಕೆಲ ನಿಯಮಗಳು ಮಾಡಿ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಈಗ ವರದಿ ಸಿದ್ಧಪಡಿಸಿದವರಿಗೆ ಆ ನಿಯಮಗಳ ಜ್ಞಾನವಿಲ್ಲದಂತೆ ಕಾಣುತ್ತದೆ. ಇದ್ದರೆ, ಈ ರೀತಿ ಶಿಫಾರಸು ಮಾಡುತ್ತಿರಲಿಲ್ಲ’ ಎಂದು ಹೇಳಿದರು.

ರಕ್ಷಣೆ ಜವಾಬ್ದಾರಿ ಸರ್ಕಾರದ್ದು:

ಪಬ್‌ ಗ್ರಾಹಕಿ ಕೀರ್ತಿ, ‘ಸ್ನೇಹಿತರ ಜತೆ ಕಾಲ ಕಳೆಯಲು ವಾರಕ್ಕೊಮ್ಮೆ ಪಬ್‌ಗೆ ಹೋಗುತ್ತೇನೆ. ನಮ್ಮೆಲ್ಲರ ರಕ್ಷಣೆ ಜವಾಬ್ದಾರಿ ಸರ್ಕಾರದ್ದು. ಆದರೆ, ಪಬ್‌ನ ವಹಿವಾಟು ಅವಧಿ ಕಡಿಮೆ ಮಾಡಿ ಆ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ’ ಎಂದರು.

ಖಾಸಗಿ ಕಂಪನಿ ಉದ್ಯೋಗಿ ಮೃತ್ಯುಂಜಯ, ‘ನಿತ್ಯವೂ ರಾತ್ರಿ 12ಕ್ಕೆ ಕೆಲಸ ಮುಗಿಯುತ್ತದೆ. ಮನೆಗೆ ಹೋಗುವಾಗ ದಾರಿಯಲ್ಲೇ ಊಟ ಮಾಡಿಕೊಂಡು ಹೋಗುತ್ತೇನೆ. 11ಕ್ಕೆ ಹೋಟೆಲ್‌ಗಳು ಬಂದ್‌ ಮಾಡಿದರೆ ನಮ್ಮಂಥ ಉದ್ಯೋಗಿಗಳ ಗತಿ ಏನು’ ಎಂದು ಪ್ರಶ್ನಿಸಿದರು.

’ಯಾರೋ ಕೆಲವರು ಸಲಹೆ ನೀಡಿದರು ಎಂಬ ಕಾರಣಕ್ಕೆ ಉಳಿದವರಿಗೆ ತೊಂದರೆ ಕೊಡುವುದು ಸರಿಯಲ್ಲ. ಸಮಿತಿಯ ಸದಸ್ಯರು, ವಹಿವಾಟು ಅವಧಿ
ನಿಗದಿ ವಿಷಯದಲ್ಲಿ ಇನ್ನೊಮ್ಮೆ ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಕೋರಮಂಗಲ ನಿವಾಸಿ ಆರ್‌.ಹರೀಶ್‌, ‘ಬೇರೆ ಊರುಗಳಿಂದ ರಾತ್ರಿಯೇ ಹೆಚ್ಚು ಜನರು ಬೆಂಗಳೂರಿಗೆ ಬರುತ್ತಾರೆ. ಅವರೆಲ್ಲ ಆಹಾರಕ್ಕಾಗಿ ಬೆಳಿಗ್ಗೆ 10 ಗಂಟೆಯವರೆಗೆ ಕಾಯುವುದಿಲ್ಲ. ಅವರಿಗಾದರೂ ಹೋಟೆಲ್‌ಗಳ ತೆರೆದಿರಬೇಕು’ ಎಂದರು.

‘ಅನಧಿಕೃತ ಪಬ್‌ ಬಂದ್‌ ಮಾಡಿ’

ಎಚ್‌ಎಎಲ್‌ 3ನೇ ಹಂತದ ನಿವಾಸಿಗಳ ಹಿತಾಭಿವೃದ್ಧಿ ಸಂಘದ ಸದಸ್ಯರು, ‘ವಸತಿಪ್ರದೇಶದಲ್ಲಿರುವ ಅನಧಿಕೃತ ಪಬ್‌, ರೆಸ್ಟೋರೆಂಟ್‌ಗಳನ್ನು ಮೊದಲು ಬಂದ್ ಮಾಡಿ. ನಂತರ, ವಹಿವಾಟಿನ ಅವಧಿ ಸೀಮಿತಗೊಳಿಸಿ’ ಎಂದು ಟ್ವೀಟ್ ಮಾಡಿದ್ದಾರೆ.

ರಾಜೇಶ್‌ ಯಾದವ್ ಎಂಬುವರು, ‘ಹಲವು ಪಬ್‌ಗಳು ಹೆಣ್ಣು ಮಕ್ಕಳ ಜೀವನವನ್ನೇ ಹಾಳು ಮಾಡುತ್ತಿವೆ. ಅಂಥ ಪಬ್‌ಗಳನ್ನು ಮುಚ್ಚಿಸಿ, ಯುವತಿಯರನ್ನು ರಕ್ಷಿಸಬೇಕು’ ಎಂದಿದ್ದಾರೆ.

‘ನೈಟ್‌ಲೈಫ್‌ ಅವಧಿ ವಿಸ್ತರಣೆ ಮಾಡಿದ್ದರಿಂದ ಹೆಣ್ಣು ಮಕ್ಕಳ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದು ಹಲವು ಸ್ವಯಂಸೇವಾ ಸಂಘಟನೆಗಳು ಹಾಗೂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಅದರ ಆಧಾರದಲ್ಲಿ ನಾವು ಈ ಶಿಫಾರಸು ಮಾಡಿದ್ದೇವೆ’ ಎಂದು ಸಮಿತಿಯ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಸಮಜಾಯಿಷಿ ನೀಡಿದ್ದಾರೆ.

* ಈ ಶಿಫಾರಸು ಜಾರಿಗೆ ತಂದರೆ ಕಾನೂನು ಹೋರಾಟ ನಡೆಸಲಾಗುವುದು.

   – ಬಿ.ಚಂದ್ರಶೇಖರ್ ಹೆಬ್ಬಾರ್‌, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT