ರಾಮನಗರ: ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಚನ್ನಪಟ್ಟಣದ ಗೊಂಬೆ ಉದ್ಯಮ ಲಾಕ್ಡೌನ್ ಕಾರಣಕ್ಕೆ ನೆಲಕಚ್ಚುತ್ತಿದೆ. ಕಳೆದೊಂದು ವರ್ಷದಲ್ಲಿ ಸಾವಿರಾರು ಕರಕುಶಲಕರ್ಮಿಗಳ ಬದುಕು ಬೀದಿಗೆ ಬಿದ್ದಿದೆ.
ಮೂರು ಶತಮಾನಕ್ಕೂ ಹೆಚ್ಚು ಅವಧಿಯಿಂದ ಚನ್ನಪಟ್ಟಣದಲ್ಲಿ ಗೊಂಬೆ ತಯಾರಿಕೆ ಕಲೆ ಮನೆಮನೆಗೆ ಪಸರಿಸಿದೆ. ಚೀನಿ ಆಟಿಕೆಗಳ ಆಮದಿನಿಂದ ಏಟು ತಿಂದಿದ್ದ ಈ ಉದ್ಯಮ ಈಗ ಲಾಕ್ಡೌನ್ನಿಂದ ಮತ್ತಷ್ಟು ನಷ್ಟ ಅನುಭವಿಸುತ್ತಿದೆ. ಜನಸಂಚಾರವೇ ಇಲ್ಲದ ಕಾರಣ ಬೆಂಗಳೂರು–ಮೈಸೂರು ಹೆದ್ದಾರಿ ಬದಿಯ ಟಾಯ್ಸ್ ಎಂಪೋರಿಯಂಗಳ ಬಾಗಿಲು ಮುಚ್ಚಿವೆ. ಕಲಾವಿದರು ಪರ್ಯಾಯ ವೃತ್ತಿ ಹುಡುಕಿಕೊಳ್ಳುತ್ತಿದ್ದಾರೆ. ಹತ್ತಾರು ಸಾವಿರದಷ್ಟಿದ್ದ ಕರಕುಶಲಿಗರ ಸಂಖ್ಯೆ 2–3 ಸಾವಿರಕ್ಕೆ ಇಳಿದಿದೆ.
ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲೂ ಹಿಂದಿನ ಲವಲವಿಕೆ ಇಲ್ಲ. ಅದರಲ್ಲೂ ದೊಡ್ಡ ಕಾರ್ಖಾನೆಗಳು ಉತ್ಪಾದನೆಯ ಪುನರಾರಂಭಕ್ಕೆ ತಿಣುಕಾಡುತ್ತಿವೆ. ಜಿಲ್ಲೆಯ ಹತ್ತಾರು ಗಾರ್ಮೆಂಟ್ಸ್ ಕಾರ್ಖಾನೆಗಳು ಮುಚ್ಚಿದ್ದು, ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರ ಉದ್ಯೋಗ ಕಸಿದಿದೆ.