ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಆಹಾರದಲ್ಲಿ ನಾರಿನಾಂಶವಿದೆಯೆ?

Last Updated 12 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಸಸ್ಯಮೂಲ ಆಹಾರ ಉತ್ಪನ್ನಗಳ ಜೀರ್ಣವಾಗದ ಭಾಗವೇ ನಾರು. ಸಾಮಾನ್ಯವಾಗಿ ಆಹಾರ ಪದಾರ್ಥಗಳು ಬಾಯಿ, ಜಠರ ಹಾಗೂ ಸಣ್ಣ ಕರುಳುಗಳಲ್ಲಿ ವಿವಿಧ ಕಿಣ್ವಗಳ ಸಹಾಯದಿಂದ ಅತಿ ಸಣ್ಣ ಕಣಗಳಾಗಿ ಮಾರ್ಪಾಡಾಗಿ ನಂತರ ಪೌಷ್ಟಿಕಾಂಶಗಳ ರೂಪದಲ್ಲಿ ರಕ್ತ ಪರಿಚಲನೆಯನ್ನು ಸೇರುತ್ತವೆ. ಅವುಗಳ ಜೊತೆಯಲ್ಲಿಯೇ ಜೀರ್ಣವಾಗದೆಯೇ ಉಳಿಯುವ ಕೆಲವು ಅಂಶಗಳೂ ಆಹಾರದಲ್ಲಿರುತ್ತವೆ. ಜೀರ್ಣವಾಗದ ಮಾತ್ರಕ್ಕೆ ಈ ನಾರು ಅನುಪಯುಕ್ತ ಎಂದು ನೀವು ತಿಳಿದಿದ್ದರೆ, ಅದು ಖಂಡಿತ ತಪ್ಪು. ಇದು ಹಲವು ಬಗೆಯಲ್ಲಿ ಶರೀರದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಆಹಾರದಲ್ಲಿ ಮೂರು ಬಗೆಯ ನಾರಿನಾಂಶವಿರುತ್ತದೆ. ಅವೆಂದರೆ, ಕರಗಬಲ್ಲ ನಾರಿನಾಂಶ, ಕರಗದ ನಾರಿನಾಂಶ ಹಾಗೂ ಜೀರ್ಣವಾಗದ ಪಿಷ್ಟದ ಅಂಶ. ಕರಗಬಲ್ಲ ನಾರಿನಾಂಶವು ಆಹಾರವು ಜಠರದಿಂದ ಕರುಳುಗಳಿಗೆ ತಲುಪುವ ವೇಗವನ್ನು ನಿಧಾನಿಸುತ್ತದೆ. ಇದರಿಂದ ವ್ಯಕ್ತಿಗೆ ಹೊಟ್ಟೆ ತುಂಬಿದಂತಹ ಭಾವ ಉಂಟಾಗುವುದರಿಂದ ಬಹಳ ಹೊತ್ತಿನವರೆಗೆ ಹಸಿವಿನ ಅನುಭವವಾಗುವುದಿಲ್ಲ. ಅಲ್ಲದೆ, ಶರೀರದಲ್ಲಿನ ಕೊಲೆಸ್ಟ್ರಾಲ್ ವಿಸರ್ಜನೆಗೆ ನೆರವಾಗುವ ಮೂಲಕ ಅದರ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಹಾಗೂ ರಕ್ತದ ಸಕ್ಕರೆ ಅಂಶವನ್ನು ಸ್ಥಿರಗೊಳಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಕರಗದ ನಾರಿನಾಂಶವು ನೀರನ್ನು ಹೀರಿಕೊಂಡು, ಕರುಳುಗಳಲ್ಲಿನ ಆಹಾರದ ಕಣಗಳು ಮೆತ್ತಗಾಗಲು ಮತ್ತು ಆ ಮೂಲಕ ಕರುಳುಗಳ ನಿಯಮಿತ ಚಲನೆಗೆ ಸಹಕರಿಸುತ್ತದೆ. ಇದು ಕರುಳುಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಹಾಗೂ ಅವುಗಳ ಆರೋಗ್ಯವನ್ನು ಕಾಪಾಡಲು ಬಹಳ ಮುಖ್ಯ.

ಜೀರ್ಣವಾಗದ ಪಿಷ್ಟವು ಕರುಳುಗಳಲ್ಲಿ ಶರೀರಕ್ಕೆ ಅತ್ಯಗತ್ಯವಾದ ಸ್ನೇಹಮಯಿ ಸೂಕ್ಷ್ಮಾಣುಗಳ ಉತ್ಪತ್ತಿಗೆ ನೆರವಾಗುತ್ತದೆ. ಈ ಸೂಕ್ಷ್ಮಾಣುಗಳು ಜೀರ್ಣವಾಗದ ಆಹಾರ ಪದಾರ್ಥಗಳ ನಿರ್ವಹಣೆಗೆ, ರೋಗಕಾರಕ ಸೂಕ್ಷ್ಮಾಣುಗಳ ವಿರುದ್ಧ ಹೋರಾಡಲು ಹಾಗೂ ಕರುಳಿನ ರೋಗ ನಿರೋಧಕ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತವೆ.

ಸಾಮಾನ್ಯವಾಗಿ ವ್ಯಕ್ತಿಯೊಬ್ಬನಿಗೆ ದಿನವೂ 25-30 ಗ್ರಾಂಗಳಷ್ಟು ನಾರಿನಾಂಶದ ಅಗತ್ಯತೆ ಇರುತ್ತದೆ.

ನಾರಿನಾಂಶ ಹೇರಳವಾಗಿರುವ ಆಹಾರ ಪದಾರ್ಥಗಳು ಯಾವುವು?

ಈ ನಾರಿನಾಂಶವು ಹಣ್ಣು, ತರಕಾರಿ, ಸೊಪ್ಪು, ದ್ವಿದಳ ಧಾನ್ಯಗಳು, ಬಾರ್ಲಿ, ತವುಡು (ಓಟ್ಸ್-ಧಾನ್ಯಗಳ ಮೇಲಿನ ಸಿಪ್ಪೆಯಂತಹ ಭಾಗ), ಒಣಕಾಯಿಗಳು (ನಟ್ಸ್), ವಿವಿಧ ಬಗೆಯ ಹಿಟ್ಟುಗಳು ಮಸೂರ, ಬಾದಾಮಿ, ಏಪ್ರಿಕಾರ್ಟ್‌, ಗೆಣಸು, ಬ್ರೊಕೊಲಿ, ಸೇಬು, ಪೇರಲೆ, ಬೀನ್ಸ್, ಬಟಾಣಿ, ಕ್ಯಾರೆಟ್ ಇನ್ನೂ ಮುಂತಾದ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಇರುತ್ತದೆ.

ಎಲ್ಲ ಬಗೆಯ ಹಣ್ಣುಗಳು ಹಾಗೂ ತರಕಾರಿಗಳಲ್ಲಿಯೂ ನಾರಿನಾಂಶ ಸಾಕಷ್ಟಿರುತ್ತದೆ.

ನಿಯಮಿತವಾದ ನಾರಿನಾಂಶದ ಸೇವನೆಯಿಂದ ಪ್ರಯೋಜನಗಳೇನು?

ಕರುಳಿನ ನಿಯಮಿತವಾದ ಚಲನೆಗೆ ನೆರವಾಗುವುದರ ಮೂಲಕ ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಹೊಟ್ಟೆ ತುಂಬಿದ ಭಾವದಿಂದಾಗಿ ಅತಿಯಾಗಿ ಆಹಾರವನ್ನು ಸೇವಿಸುವುದನ್ನು ತಡೆದು, ತೂಕ ಇಳಿಸಲೂ ನೆರವಾಗುತ್ತದೆ.

ಹೆಚ್ಚುವರಿ ಕೊಲೆಸ್ಟ್ರಾಲ್‌ ಅಂಶದ ವಿಸರ್ಜನೆಗೆ ದಾರಿ ಮಾಡಿಕೊಡುವುದರ ಮೂಲಕ ಬೊಜ್ಜು, ಅಧಿಕತೂಕವನ್ನು ನಿಯಂತ್ರಿಸಬಲ್ಲದು.

ದೊಡ್ಡ ಕರುಳಿನ ಕ್ಯಾನ್ಸರ್ ಸಂಭವವನ್ನು ಕಡಿಮೆ ಮಾಡುತ್ತದೆ.

ಹಿರಿಯ ನಾಗರಿಕರಲ್ಲಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಪದೇ ಪದೇ ಮಲವಿಸರ್ಜನೆ, ಹೊಟ್ಟೆ ನೋವು ಹಾಗೂ ಹೊಟ್ಟೆ ಉಬ್ಬಿದಂತಹ ಸಮಸ್ಯೆ ( ಇರಿಟಬಲ್ ಬೊವೆಲ್ ಸಿಂಡ್ರೋಮ್) ಯಿಂದ ಬಳಲುವವರಲ್ಲಿ ನಾರಿನಾಂಶ ಬಹಳವೇ ಮುಖ್ಯ.

ಸಕ್ಕರೆ ಅಂಶದ ಹೀರಿಕೆಯನ್ನು ನಿಧಾನಿಸಿ, ರಕ್ತದಲ್ಲಿ ಅದರ ಪ್ರಮಾಣವನ್ನು ಸ್ಥಿರವಾಗಿಡುವಲ್ಲಿ ಸಹಕರಿಸುತ್ತದೆ.

ದೇಹ ತೂಕವನ್ನು ನಿಯಂತ್ರಣದಲ್ಲಿಡುವುದರ ಮೂಲಕ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ಸಮಸ್ಯೆಗಳನ್ನು ನಿಯಂತ್ರಿಸಲೂ ಸಹಕರಿಸುತ್ತದೆ.

ಗುದದ್ವಾರದಲ್ಲಿನ ಬಿರುಕಿನ ( ಎನಲ್ ಫಿಶರ್) ಸಮಸ್ಯೆಯಿರುವವರಲ್ಲಿ ಮಲ ವಿಸರ್ಜನೆ ಸುಲಭವಾಗುವ ಮೂಲಕ ನೋವು ಕಡಿಮೆ ಮಾಡಲು ನೆರವಾಗುತ್ತದೆ.

ಈ ಎಲ್ಲ ಕಾರಣಗಳಿಗಾಗಿ ನಮ್ಮ ಆಹಾರದಲ್ಲಿ ನಾರಿನಾಂಶವಿದೆಯೆ ಎಂದು ಖಾತ್ರಿ ಮಾಡಿಕೊಳ್ಳುವುದು ಅತ್ಯಗತ್ಯ. ಅಂತೆಯೇ, ಒಮ್ಮೆಲೇ ಅತಿ ಹೆಚ್ಚು ನಾರಿನಾಂಶವನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದೂ ಒಳ್ಳೆಯದಲ್ಲ. ಇದು ದಿಢೀರ್ ಹೊಟ್ಟೆ ಉಬ್ಬುವಿಕೆಗೆ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು. ಆಹಾರದಲ್ಲಿ ಕ್ರಮೇಣ ನಾರಿನಾಂಶವನ್ನು ಹೆಚ್ಚಿಸುತ್ತಾ ಹೋಗುವುದು ಉತ್ತಮ. ಆಹಾರದಲ್ಲಿ ಅತಿಯಾದ ನಾರಿನಾಂಶವೂ ಒಳ್ಳೆಯದಲ್ಲ. ಇದು ಆಹಾರದಲ್ಲಿನ ಕ್ಯಾಲ್ಸಿಯಂ, ಮೆಗ್ನಿಸಿಯಂ ಮತ್ತು ಕಬ್ಬಿಣಾಂಶದ ಹೀರಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಕನ್ನುಂಟು ಮಾಡುತ್ತದೆ.

ಎರಡು ಬಗೆಯ ಹಣ್ಣುಗಳು ಮತ್ತು ಎರಡರಿಂದ ಮೂರು ಬಗೆಯ ತರಕಾರಿಗಳು ನಿಮ್ಮ ದೈನಂದಿನ ಆಹಾರದಲ್ಲಿ ಇದೆಯಾದರೆ ನೀವು ಸರಿಯಾದ ಪ್ರಮಾಣದ ನಾರಿನಾಂಶವನ್ನು ಸೇವಿಸುತ್ತಿರುವಿರೆಂದೇ ಅರ್ಥ. ನಾರಿನಾಂಶದ ಜೊತೆಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುವುದೂ ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT