ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾಲಿಟಿ ಮೊಟ್ಟೆ!

ವೈದ್ಯ-ಹಾಸ್ಯ
Last Updated 3 ಮೇ 2013, 19:59 IST
ಅಕ್ಷರ ಗಾತ್ರ

ಆ  ದಂಪತಿಗೆ ಮದುವೆಯಾಗಿ ಹತ್ತು ವರ್ಷ ಆಗಿದ್ದರೂ ಮಕ್ಕಳಾಗಿರಲಿಲ್ಲ. ಹಲವೆಡೆ ಚಿಕಿತ್ಸೆ ಮಾಡಿಸಿದರೂ ಫಲಕಾರಿಯಾಗದೆ ಕೊನೆಗೆ ಖ್ಯಾತ ವೈದ್ಯರೊಬ್ಬರ ಹತ್ತಿರ ಐ.ವಿ.ಎಫ್ ಚಿಕಿತ್ಸೆ ಮಾಡಿಸಿದರು. ಅದೂ ವಿಫಲ ಆಯ್ತು. ತುಂಬಾ ಹಣ ಖರ್ಚು ಮಾಡಿದ್ದ ಬೇಜಾರೂ ಇತ್ತು ಅವರಿಗೆ. ನನ್ನ ಹತ್ತಿರ ಬಂದು ತಮ್ಮ ಗೋಳು ಹೇಳಿಕೊಳ್ಳುತ್ತಾ `ಅಲ್ಲಾ ಡಾಕ್ಟ್ರೆ, ಐ.ವಿ.ಎಫ್ ಮಾಡಿಸಿದೆವಲ್ಲಾ, ಆ ಡಾಕ್ಟ್ರು ಕೊನೆಗೆ ಏನು ಹೇಳಿದ್ರು ಗೊತ್ತಾ, ಮೊಟ್ಟೆ ಒಳ್ಳೆ ಕ್ವಾಲಿಟಿ ಇರಲಿಲ್ಲ, ಅದಕ್ಕೇ ಫೇಲ್ ಆಯ್ತು ಅಂದ್ರು. ಅಲ್ಲಾ ನೀವೇ ನಮ್ಮ ಮನೆಗೆ ಬಂದು ನೋಡಿ, ಎಂತೆಂಥ ಕ್ವಾಲಿಟಿ ಮೊಟ್ಟೆಗಳನ್ನ ಇಟ್ಟಿದ್ದೀವಿ ಗೊತ್ತಾ' ಎಂದಾಗ ವಿಪರೀತ ನಗು ಬಂದಿತ್ತು.

`ಮೊಟ್ಟೆ ಅಂದ್ರೆ ಕೋಳಿಮೊಟ್ಟೆ ಅಲ್ಲಪ್ಪಾ, ನಿಮ್ಮ ಹೆಂಡತಿಯ ಅಂಡಾಶಯದಲ್ಲಿ ಬಿಡುಗಡೆಯಾಗುವ ಎಗ್, ಅದನ್ನೇ ಮೊಟ್ಟೆ ಅಂದಿದ್ದಾರೆ' ಎಂದೆ.

ಇದು ಬಿಡಿ  ನಾನೇ ಒಂದು ದಿನ ಯಾಮಾರಿದ್ದೆ. ಒಮ್ಮೆ ಐ.ವಿ.ಎಫ್ ತಜ್ಞೆಯೊಬ್ಬರು ಮಾತಾಡುತ್ತ, `ಇವತ್ತು ಎಗ್ ಪಿಕಪ್ ಇದೆ, ಬರ‌್ತೀನಿ' ಎಂದು ಎದ್ದುಹೋದರು. ಚಿಕಿತ್ಸೆ ಮಾಡುವಾಗ ಒಳ್ಳೆಯ ಅಂಡಾಣುಗಳನ್ನು ತೆಗೆಯುವ ಕ್ರಿಯೆಗೆ ಎಗ್ ಪಿಕಪ್ ಎನ್ನುತ್ತಾರೆ ಎಂದು ನನಗಾಗ ಗೊತ್ತಿರಲಿಲ್ಲ. ಈ ಐ.ವಿ.ಎಫ್ ತಜ್ಞೆ ಮೊಟ್ಟೆ ವ್ಯಾಪಾರ ಮಾಡುತ್ತಾರಾ ಎಂದು ಅನುಮಾನ ಬಂದಿತ್ತು!

ನಮ್ಮ ಹೆಣ್ಣು ಮಕ್ಕಳಿಗೆ ಯಾಕೋ ಏನೋ ಮುಟ್ಟಾದ ದಿನ ಯಾವುದು ಎಂದರೆ ಮಾತ್ರ ಬಹಳ ಕನ್‌ಫ್ಯೂಸ್ ಆಗಿಬಿಡುತ್ತಾರೆ. ಮದುವೆಯಾಗಿ ಆರು ತಿಂಗಳು ಆಗಿರುತ್ತದೆ. ಕ್ಲಿನಿಕ್‌ಗೆ ಬರುತ್ತಾರೆ.

`ಡಾಕ್ಟ್ರೆ, ನಾನು ಹೋದ ತಿಂಗಳು 20ಕ್ಕೆ ಮುಟ್ಟಾಗಿದ್ದೆ, ಈ ತಿಂಗಳು 10ನೇ ತಾರೀಖಾದರೂ ಇನ್ನೂ ಆಗಿಲ್ಲ' ಎನ್ನುತ್ತಾರೆ.
`ಅಲ್ಲಮ್ಮಾ, ಇನ್ನೂ ಒಂದು ತಿಂಗಳು ಆಗಿಲ್ವಲ್ಲ. ಆಗುತ್ತೆ ಬಿಡಿ'.
`ಅಲ್ಲಾ, ನಾನು ಬಸುರಿ ಇದೀನಾಂತ ಸ್ವಲ್ಪ ನೋಡಬೇಕಿತ್ತು'.
`ಅಲ್ಲಮ್ಮಾ ಇನ್ನೂ ಒಂದು ತಿಂಗಳೇ ಆಗಿಲ್ಲ. ಅದು ಹೇಗೆ ಗೊತ್ತಾಗುತ್ತೆ'.
`ಅದಲ್ಲ ಡಾಕ್ಟ್ರೆ, ಈ 20 ಬಂದರೆ ಎರಡು ತಿಂಗಳು ತುಂಬತ್ತಲ್ಲಾ'
ನಾವು ಮತ್ತೆ ಯಾವ ತಿಂಗಳು, ಯಾವ ತಾರೀಖು ಮುಟ್ಟಾಗಿದ್ದು ಅಂತ ಕ್ಯಾಲೆಂಡರ್ ಕೈಗೆ ಕೊಟ್ಟು `ಸರಿಯಾಗಿ ನೋಡಿಕೊಂಡು ಹೇಳಮ್ಮಾ' ಎನ್ನಬೇಕು, ಆಗ ನೋಡಿ, ಅಳೆದೂ ತೂಗಿ... ಸರಿಯಾಗಿ ಹೇಳುತ್ತಾರೆ.

***
`ಡಾಕ್ಟ್ರೆ, ನನ್ನ ಪೀರಿಯಡ್ಡು ಸರಿಯಾಗೇ ಆಗಿಲ್ಲ' ಎಂದವಳನ್ನ `ಕೂತ್ಕೋಮ್ಮಾ' ಎಂದೆ.
`ಲಾಸ್ಟ್ ಯಾವಾಗ ಆಗಿತ್ತಮ್ಮಾ' ಕೇಳಿದೆ.
“ಓ ಲಾಸ್ಟ್... ಆ... ಅದೇ ಕೆಂಪಾಪುರದ ಹಳ್ಳಿ ರಥ ಎಳುದ್ರಲ್ಲಾ, ಅವತ್ತೇ'.
`ಅಯ್ಯೋ ಆ ಕೆಂಪಾಪುರದ ರಥ ಯಾವತ್ತು ಅಂತ ನನಗೇನು ಗೊತ್ತು' ಎಂದೆ.
`ಹಾಗೆಲ್ಲ ಅನ್ನಬೇಡಿ, ತುಂಬಾ ಮಹಿಮೆ ಇರೋ ದೇವ್ರ ನಮ್ಮ ಮುನೀಶ್ವರಪ್ಪ. ಕೆಂಪಾಪುರದ ರಥ ಅಂದ್ರೆ ಇಡೀ ಜಗತ್ತಿಗೇ ಫೇಮಸ್ಸು. ಅಂಥಾದ್ರಲ್ಲಿ ಗೊತ್ತಿಲ್ಲ ಅಂತೀರಲ್ಲ ಡಾಕ್ಟ್ರೆ, ಸ್ವಲ್ಪ ಕ್ಯಾಲೆಂಡರ್ ನೋಡಿ ಲೆಕ್ಕ ಹಾಕಿ' ಎಂದಳು.

`ನೋಡಮ್ಮ ರಥಗಿಥ ಎಲ್ಲ ನಂಗೆ ಗೊತ್ತಿಲ್ಲ. ಮನೇಗೆ ಹೋಗಿ ತಿಳ್ಕೊಂಡು ಬಾ' ಎಂದೆ, `ಆಯ್ತು ಡಾಕ್ಟ್ರೆ, ಹಾಗೇ ಮಾಡ್ತೀನಿ, ಆದ್ರೆ ನಮ್ಮ ಊರಿನ ದೇವ್ರನ್ನ ಮಾತ್ರ ಅವಮಾನ ಮಾಡಬೇಡಿ' ಎಂದು ಎದ್ದುಹೋದಳು.
ಎಲಾ ಇವಳ, ದೇವರನ್ನ ನಾನು ಅವಮಾನ ಮಾಡಿದೆನೇ ಎನಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT