ನವದೆಹಲಿ: ತೀವ್ರ ಆಮ್ಲಜನಕದ ಕೊರತೆಯಿಂದಾಗಿ ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ 20 ರೋಗಿಗಳು ಶುಕ್ರವಾರ ರಾತ್ರಿಯಿಂದೀಚೆಗೆ ಮೃತಪಟ್ಟಿದ್ದಾರೆ.
‘ಆಮ್ಲಜನಕದ ದಾಸ್ತಾನು ಮುಗಿದ ಕಾರಣ, ರೋಗಿಗಳಿಗೆ ಅಗತ್ಯ ಒತ್ತಡದಲ್ಲಿ ಆಮ್ಲಜನಕ ಪೂರೈಸುವಲ್ಲಿ ವ್ಯತ್ಯಯವಾಗಿರುವುದೇ ಈ ಘಟನೆಗೆ ಕಾರಣ‘ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಡಿ.ಕೆ.ಬಲುಜಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಆಸ್ಪತ್ರೆಯಲ್ಲಿ 200 ರೋಗಿಗಳು ದಾಖಲಾಗಿದ್ದು, ಬೆಳಿಗ್ಗೆ 10.45ರ ವೇಳೆಗೆ ಕೇವಲ ಅರ್ಧಗಂಟೆ ಪೂರೈಸುವಷ್ಟು ಆಮ್ಲಜನಕ ದಾಸ್ತಾನಿತ್ತು‘ ಎಂದು ಅವರು ಹೇಳಿದರು. ಆಮ್ಲಜನಕಕ್ಕೆ ಬೇಡಿಕೆ ಸಲ್ಲಿಸಿ ಗಂಟೆಗಳ ನಂತರ ಶುಕ್ರವಾರ ಮಧ್ಯರಾತ್ರಿ ಆಮ್ಲಜನಕವನ್ನು ಆಸ್ಪತ್ರೆಗೆ ಪೂರೈಸಲಾಗಿದೆ ಎಂದರು
‘ನಿಮಗೆ ಸರ್ಕಾರದ ನೆರವು ಸಿಕ್ಕಿದೆಯೇ’ ಎಂಬ ಪ್ರಶ್ನೆಗೆಉತ್ತರಿಸಿದ ವೈದ್ಯರು, ‘ಯಾರೂ ಯಾವುದೇ ವಿಚಾರದಲ್ಲೂ ಭರವಸೆ ನೀಡುವುದಿಲ್ಲ. ನಮ್ಮ ಕೈಲಾದಷ್ಟು ಮಾಡುತ್ತೇವೆ ಎನ್ನುತ್ತಾರೆ‘ ಎಂದು ಹೇಳಿದರು.
‘ಆಸ್ಪತ್ರೆಯಲ್ಲಿ ಶೇ 80ರಷ್ಟು ರೋಗಿಗಳು ಆಮ್ಲಜನಕದ ನೆರವಿನೊಂದಿಗೆ ಚಿಕಿತ್ಸೆಪಡೆಯುತ್ತಿದ್ದಾರೆ. ಶೇ 35ರಷ್ಟು ರೋಗಿಗಳು ಐಸಿಯುನಲ್ಲಿದ್ದಾರೆ‘ ಎಂದು ಡಾ.ಬಲುಜಾ ಹೇಳಿದರು.