ಪುದುಚೇರಿ: ಇಲ್ಲಿನ ‘ರಾಜ್ ನಿವಾಸ್’ದಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಪುದುಚೇರಿಯ ಮುಖ್ಯಮಂತ್ರಿಯಾಗಿ ಎಐಎನ್ಆರ್ಸಿ ನಾಯಕ ಎನ್. ರಂಗಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಲೆಫ್ಟಿನೆಂಟ್ ಗವರ್ನರ್ ತಮಿಳುಸೈ ಸೌಂದರರಾಜನ್ ಅವರು ರಂಗಸ್ವಾಮಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ರಂಗಸ್ವಾಮಿ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ.
ತಮಿಳಿನಲ್ಲಿ ಮತ್ತು ದೇವರ ಹೆಸರಿನಲ್ಲಿ ರಂಗಸ್ವಾಮಿ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದರು.
ಮುಂದಿನ ಕೆಲ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಐಎನ್ಆರ್ಸಿ ಮತ್ತು ಬಿಜೆಪಿ ಒಳಗೊಂಡ ಮೈತ್ರಿ ಸರ್ಕಾರದ ನೇತೃತ್ವವನ್ನು ರಂಗಸ್ವಾಮಿ ವಹಿಸಿಕೊಂಡಿದ್ದಾರೆ.