ನವದೆಹಲಿ: ಇಂಡೋ–ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆ ಪ್ರಕರಣದ ಆರೋಪಿ, ಟಿಎಂಸಿ ಮುಖಂಡ ಅನುಬ್ರತಾ ಮೊಂಡಲ್ ಅವರಿಗೆ ಸೇರಿದ್ದು ಎನ್ನಲಾದ ₹ 16.97 ಕೋಟಿ ಮೌಲ್ಯದ ಸ್ಥಿರ ಠೇವಣಿಯನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆಯ ವೇಳೆ ತನಿಖಾ ಸಂಸ್ಥೆಯು ಈ ಸ್ಥಿರ ಠೇವಣಿಯನ್ನು ಪತ್ತೆಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಬ್ರತಾ ಮೊಂಡಲ್ ಅವರ ಮಗಳನ್ನು ಪ್ರಶ್ನಿಸಲು ಬೋಲಾಪುರ್ನ ನಿಚುಪಟ್ಟಿ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ತೆರಳಿದ್ದರು. ಆದರೆ, ಅನುಬ್ರತಾ ಅವರ ಮಗಳು ಸುಕನ್ಯಾ ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಹತ್ತೇ ನಿಮಿಷದಲ್ಲಿ ವಾಪಸ್ ಆಗಿದ್ದಾರೆ.
ನಿಗದಿತ ಸಮಯಕ್ಕೆ ಸಿಬಿಐ ಎದುರು ವಿಚಾರಣೆಗೆ ಹಾಜರಾಗದೆ ಮೂರು ದಿನಗಳಲ್ಲಿ ಎರಡು ಬಾರಿ ತಪ್ಪಿಸಿಕೊಂಡಿದ್ದ ಅನುಬ್ರತಾ ಮೊಂಡಲ್ ಅವರನ್ನು ಕಳೆದ ಗುರುವಾರ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಇಲಂಬಜಾರ್ನಲ್ಲಿ ಜಾನುವಾರುಗಳನ್ನು ಖರೀದಿಸುತ್ತಿದ್ದ ಜಾನುವಾರು ಕಳ್ಳಸಾಗಣೆದಾರ ಎನಾಮುಲ್ ಹಕ್ ಅವರ ಸಂಗಡಿಗರಿಗೆ ಮೊಡಲ್ ಮತ್ತು ತಲೆಮರೆಸಿಕೊಮಡಿರುವ ಟಿಎಂಸಿ ನಾಯಕ ವಿನಯ್ ಮಿಶ್ರಾ ಅವರ ಸಹೋದರ ವಿಕಾಸ್ ಮಿಶ್ರಾ ಬೆಂಗಾವಲಾಗಿದ್ದರು ಎಂದು ಸಿಬಿಐ ಆರೋಪಿಸಿದೆ.
ರಾಜ್ಯದ ಇಲಾಖೆಗಳನ್ನು ಬಳಸಿಕೊಂಡು ಮೊಂಡಲ್ ಮತ್ತು ಮಿಶ್ರಾ ಒದಗಿಸುತ್ತಿದ್ದ ರಕ್ಷಣೆಯಡಿಯಲ್ಲಿ ಕಳ್ಳಸಾಗಣೆದಾರರು ಇಲಂಬಜಾರ್ನಿಂದ ಪ್ರಾಣಿಗಳನ್ನು ಇಂಡೋ-ಬಾಂಗ್ಲಾ ಗಡಿಗೆ ಸಾಗಿಸುತ್ತಿದ್ದರು ಎಂದು ಸಿಬಿಐ ಹೇಳಿದೆ.
ಈ ಜಾನುವಾರುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲು ಅವರು ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಸತೀಶ್ ಕುಮಾರ್ ಸೇರಿದಂತೆ ಕೆಲವು ಬಿಎಸ್ಎಫ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.