ನವದೆಹಲಿ: ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿನ ಪ್ರಸ್ತುತ ಭದ್ರತಾ ವಾತಾವರಣವನ್ನು ಸೇನೆ ನಿಭಾಯಿಸುತ್ತಿರುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆಯ ಉನ್ನತ ಕಮಾಂಡರ್ಗಳ ಮಟ್ಟದ ನಾಲ್ಕು ದಿನಗಳ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದ ಭದ್ರತಾ ವ್ಯವಸ್ಥೆಗಾಗಿ ಸೇನೆ ಕೈಗೊಂಡಿರುವ ಕ್ರಮಗಳ ಕುರಿತು ಹೆಮ್ಮೆ ಇದೆ’ ಎಂದರು.
‘ಭಯೋತ್ಪಾದನೆ, ದಂಗೆ ಅಥವಾ ಯಾವುದೇ ಬಾಹ್ಯ ದಾಳಿ ಮತ್ತು ಬೆದರಿಕೆಗಳನ್ನು ತಟಸ್ಥಗೊಳಿಸುವಲ್ಲಿ ಸೈನ್ಯವು ಮಹತ್ವದ ಪಾತ್ರ ವಹಿಸಿದೆ. ಸುಧಾರಣೆಗಳ ಹಾದಿಯಲ್ಲಿ ಸೈನ್ಯವನ್ನು ಮುನ್ನಡೆಸಲು ಮತ್ತು ಸೇನೆಯ ಯಶಸ್ಸಿಗೆ ನೆರವು ನೀಡಲು ರಕ್ಷಣಾ ಸಚಿವಾಲಯ ಬದ್ಧವಾಗಿದೆ’ ಎಂದು ಸಚಿವರು ಹೇಳಿದರು.