ಸಿಸ್ಸು (ಹಿಮಾಚಲ ಪ್ರದೇಶ):‘ಯಾವುದೇ ಪ್ರದೇಶದ ಮತಗಳನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ‘ ಎಂದು ಸ್ಪಷ್ಟಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರು, ‘ಸರ್ಕಾರದ ಎಲ್ಲ ಯೋಜನೆಗಳು ಅಭಿವೃದ್ಧಿ ಕೇಂದ್ರೀಕೃತವಾಗಿವೆ‘ ಎಂದು ಪ್ರತಿಪಾದಿಸಿದರು.
ಇಲ್ಲಿನ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ ಅಟಲ್ ಟನಲ್ ಯೋಜನೆ ಸರ್ಕಾರದ ಅಭಿವೃದ್ಧಿಯ ಒಂದು ಭಾಗ. ದೇಶದ ಪ್ರತಿಯೊಬ್ಬ ನಾಗರಿಕರೂ ಇದರ ಸೌಲಭ್ಯವನ್ನು ಪಡೆಯುತ್ತಾರೆ‘ ಎಂದು ವಿವರಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಒಮ್ಮೆ ಕೆದಕಿ ನೋಡಿ, ಆ ಸಮಯದಲ್ಲಿ ಇಲ್ಲಿನ ಲಹೌಲ್ – ಸ್ಪಿತಿ ಕಣಿವೆಯ ಜನರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸದೇ ನಿರ್ಲಕ್ಷ್ಯಿಸಿರುವುದು ಗೊತ್ತಾಗುತ್ತದೆ ಎಂದರು.
‘ಕೆಲವು ಜಿಲ್ಲೆಗಳಿಗೆ ಸರಿಯಾಗಿ ಸೌಲಭ್ಯಗಳು ತಲುಪಿಲ್ಲ. ಆದರೆ, ಈಗ ಹಾಗಿಲ್ಲ. ‘ಪ್ರತಿಯೊಬ್ಬರ ನೆರವಿನಿಂದ, ಎಲ್ಲರನ್ನೂ ವಿಶ್ವಾಸದೊಂದಿಗೆ ಎಲ್ಲರ ವಿಕಾಸ‘ ಎಂಬ ತತ್ವವನ್ನು ಅನುಸರಿಸಲಾಗುತ್ತಿದೆ‘ ಎಂದು ಮೋದಿ ಹೇಳಿದರು.
‘ದಲಿತರು, ಶೋಷಿತರು, ಸೌಲಭ್ಯವಂಚಿತರು, ಆದಿವಾಸಿಗಳು ಮತ್ತು ಎಲ್ಲರಿಗೂ ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ‘ ಎಂದು ಅವರು ಹೇಳಿದರು.