ದೋಡಾ/ಜಮ್ಮು: ಜಮ್ಮು–ಕಾಶ್ಮೀರದ ದೋಡಾ ಜಿಲ್ಲೆಯ ಕೆಲವೆಡೆ ಮನೆಗಳು ಬಿರುಕು ಬಿಟ್ಟಿದ್ದು, 19 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕಿಶ್ತ್ವಾರ್– ಬಟೊಟೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ದೋಡಾದಿಂದ 30 ಕಿ.ಮೀ. ದೂರದಲ್ಲಿರುವ ನಯೀ ಬಸ್ತಿ ಗ್ರಾಮದಲ್ಲಿರುವ ಮಸೀದಿ ಹಾಗೂ ಬಾಲಕಿಯರ ಧಾರ್ಮಿಕ ಶಿಕ್ಷಣ ಕೇಂದ್ರವು ಸುರಕ್ಷಿತವಾಗಿಲ್ಲ ಎಂದು ಜಿಲ್ಲಾಡಳಿತ ಘೋಷಿಸಿದೆ.
ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಕೆಲವು ಮನೆಗಳು ಬಿರುಕುಬಿಟ್ಟಿದ್ದವು, ಆದರೆ, ಗುರುವಾರ ಭೂಕುಸಿತವು ಉಲ್ಬಣಗೊಂಡಿದ್ದು ಬಿರುಕುಬಿಟ್ಟ ಮನೆಗಳ ಸಂಖ್ಯೆ 21ಕ್ಕೆ ಏರಿದೆ.
‘19 ಸಂತ್ರಸ್ತ ಕುಟುಂಬಗಳನ್ನು ನಾವು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಥಾತ್ರಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಥರ್ ಅಮೀನ್ ಜರ್ಗರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.