ಕಾಶ್ಮೀರ: ಭದ್ರತಾ ಪಡೆಗಳಿಗೆ ಸವಾಲಾಗಿರುವ ‘ಹೈಬ್ರಿಡ್ ಉಗ್ರರು‘

ಶ್ರೀನಗರ: ಉಗ್ರರ ಪಟ್ಟಿಯಲ್ಲಿ ಇಲ್ಲದ ‘ಹೈಬ್ರಿಡ್’ ಅಥವಾ ‘ಅರೆಕಾಲಿಕ’ ಭಯೋತ್ಪಾದಕರು ನಡೆಸುತ್ತಿರುವ ದಾಳಿಗಳಿಂದಾಗಿ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ. ದಾಳಿಯ ಬಳಿಕ ಈ ಉಗ್ರರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗುತ್ತಿರುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿ ಪರಿಣಮಿಸಿದೆ.
ಶ್ರೀನಗರ ಸೇರಿದಂತೆ ಕಣಿವೆ ಪ್ರದೇಶದಲ್ಲಿ ಕಳೆದ ಕೆಲ ವಾರಗಳಲ್ಲಿ ಯುವಕರು ಪಿಸ್ತೂಲ್ಗಳಿಂದ ದಾಳಿ ನಡೆಸಿದ್ದಾರೆ. ಇವರ ಹೆಸರುಗಳು ಭದ್ರತಾ ಪಡೆ ಸಿದ್ಧಪಡಿಸಿರುವ ಉಗ್ರಗಾಮಿಗಳ ಪಟ್ಟಿಯಲ್ಲಿ ಇಲ್ಲದಿರುವುದು ತಲೆನೋವಿಗೆ ಕಾರಣವಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಓದಿ: ಜಮ್ಮು ಡ್ರೋನ್ ದಾಳಿ: ಶ್ರೀನಗರದಲ್ಲಿ ಚಾಲಕ ರಹಿತ ವಿಮಾನಗಳಿಗೆ ನಿಷೇಧ
ಈ ಕೃತ್ಯಗಳಿಗೆ ಬಳಕೆಯಾಗುತ್ತಿರುವ ವ್ಯಕ್ತಿಗಳು ಕೃತ್ಯದ ನಂತರ ತಮ್ಮ ಸಾಮಾನ್ಯ ಜೀವನ ಶೈಲಿಯಲ್ಲಿ ತೊಡಗುತ್ತಾರೆ. ಅಲ್ಲದೆ ಇನ್ನೊಂದು ಅಸೈನ್ಮೆಂಟ್ಗಾಗಿ ಕಾಯುತ್ತಿರುತ್ತಾರೆ ಎಂದು ಭದ್ರತಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ರೀತಿಯ ಹೊಸ ಪ್ರವೃತ್ತಿಗಳು ಪಾಕಿಸ್ತಾನ ಮತ್ತು ಅದರ ಗೂಢಚಾರ ಸಂಸ್ಥೆ ಐಎಸ್ಐ ನಿರ್ದೇಶನದ ಮೇರೆಗೆ ಕಣಿವೆಯಲ್ಲಿ ಹೆಚ್ಚಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜನಸಾಮಾನ್ಯರು, ವ್ಯಾಪಾರಸ್ಥರಲ್ಲಿ ಭಯ ಉಂಟು ಮಾಡುವುದು ಇವರ ಗುರಿ. ಈ ಮೂಲಕ ಆರ್ಥಿಕ ವ್ಯವಸ್ಥೆಗೆ ಹೊಡೆತ ನೀಡುವ ಉದ್ದೇಶವನ್ನು ಭಯೋತ್ಪಾದಕರು ಹೊಂದಿದ್ದಾರೆ ಎನ್ನುತ್ತಾರೆ ಅವರು.
ಸಾಮಾಜಿಕ ಕಾರ್ಯಕರ್ತರು, ಭದ್ರತೆ ಇಲ್ಲದ ರಾಜಕಾರಣಿಗಳು, ವ್ಯಾಪಾರಿಗಳು, ಕರ್ತವ್ಯದ ಮೇಲಿರದ ಪೊಲೀಸ್ ಸಿಬ್ಬಂದಿ, ಅವರ ಕುಟುಂಬದವರನ್ನು ಪಿಸ್ತೂಲಿನಿಂದ ಹತ್ಯೆ ಮಾಡುವ ಮೂಲಕ ಸಮಾಜದಲ್ಲಿ ಭಯ ಹುಟ್ಟುಹಾಕುವ ನಿಟ್ಟಿನಲ್ಲಿ ಈ ಅರೆಕಾಲಿಕ ಉಗ್ರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಎರಡು ಡ್ರೋನ್ ಪತ್ತೆ: ಸೇನೆಯಿಂದ ಗುಂಡಿನ ದಾಳಿ
‘ಸ್ಲೀಪರ್ ಸೆಲ್ಗಳು’ ಎಂದೇ ಕರೆಯಲಾಗುವ ‘ಹೈಬ್ರಿಡ್’ ಉಗ್ರರು, ‘ಅರೆಕಾಲಿಕ’ ಉಗ್ರರು ನಗರದಲ್ಲಿ ಇದ್ದಾರೆ. ಅವರ ಪ್ರಯತ್ನಗಳನ್ನು ವಿಫಲಗೊಳಿಸುವುದರ ಮೂಲಕ ಅವರನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸರು ಸಕ್ರಿಯರಾಗಿದ್ದಾರೆ’ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.