ಸಿಮ್ಡೇಗಾ, ಜಾರ್ಖಂಡ್: ಕಟ್ಟಿಗೆ ಕಳ್ಳತನಕ್ಕಾಗಿ ಮರಗಳನ್ನು ಕಡಿದ ಶಂಕೆ ಮೇಲೆ ವ್ಯಕ್ತಿಯನ್ನು ಉದ್ರಿಕ್ತರ ಗುಂಪೊಂದು ಹತ್ಯೆ ಮಾಡಿ, ಬೆಂಕಿ ಹಚ್ಚಿದೆ ಎಂದು ಆರೋಪಿಸಲಾಗಿದೆ.
ಜಾರ್ಖಂಡ್ನ ಸಿಮ್ಡೇಗಾ ಜಿಲ್ಲೆಯ ಕೊಲೆಬಿರಾ ಪೊಲೀಸ್ ಠಾಣೆ ವ್ಯಾಪ್ತಿಯ ಬೆಸ್ರಜಾರ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ವ್ಯಕ್ತಿಯನ್ನು ಸಂಜು ಪ್ರಧಾನ್ ಎಂದು ಗುರುತಿಸಲಾಗಿದೆ. ಸುಟ್ಟು ಕರಕಲಾಗಿದ್ದ ಸಂಜು ದೇಹವನ್ನು ಘಟನಾ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ರಾಮೇಶ್ವರ್ ಭಗತ್ ತಿಳಿಸಿದ್ದಾರೆ.
15 ದಿನಗಳ ಹಿಂದೆಯಷ್ಟೇ, ಜಾರ್ಖಂಡ್ ವಿಧಾನಸಭೆಯಲ್ಲಿ ‘ಗುಂಪು ಹಿಂಸಾಚಾರ ಮತ್ತು ಗುಂಪು ಹತ್ಯೆ ತಡೆ ಮಸೂದೆ–2021’ ಅಂಗೀಕರಿಸಲಾಗಿದೆ.