ಇಂದೋರ್: ‘ಸರ್ಕಾರಿ ಕಾನೂನು ಕಾಲೇಜಿನ ನಾಲ್ವರು ಮುಸ್ಲಿಂ ಪ್ರಾಧ್ಯಾಪಕರು ತರಗತಿಯಲ್ಲಿ ಸರ್ಕಾರ ಹಾಗೂ ಸೇನೆಯ ಬಗ್ಗೆ ಧಾರ್ಮಿಕ ಮೂಲಭೂತವಾದವನ್ನು ಹಾಗೂ ನಕಾರಾತ್ಮಕ ವಿಚಾರಗಳನ್ನು ಬೋಧನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಪ್ರಾಂಶುಪಾಲರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (ಎಬಿವಿಪಿ) ದೂರು ನೀಡಿದೆ.
ವಿದ್ಯಾರ್ಥಿಗಳೊಂದಿಗೆ ಒರಟಾಗಿ ನಡೆದುಕೊಳ್ಳುತ್ತಾರೆ ಎಂದು ಇಬ್ಬರು ಹಿಂದೂ ಪ್ರಾಧ್ಯಾಪಕರ ಮೇಲೂ ಎಬಿವಿಪಿ ದೂರು ನೀಡಿದೆ.
ಐದು ದಿನಗಳ ವರೆಗೆ ತರಗತಿಗಳಲ್ಲಿ ಪಾಠ ಮಾಡದಂತೆ ಮುಸ್ಲಿಂ ಪ್ರಾಧ್ಯಾಕರೂ ಸೇರಿದಂತೆ ಒಟ್ಟು ಆರು ಮಂದಿ ಪ್ರಾಧ್ಯಾಪಕರಿಗೆ ಶಾಸಕೀಯ ನಾವೀನ್ ವಿಧಿ ಮಹಾವಿದ್ಯಾಲಯದ ಪ್ರಾಂಶುಪಾಲಡಾ. ಇನಾಮುರ್ ರೆಹಮಾನ್ ಗುರುವಾರ ತಿಳಿಸಿದ್ದಾರೆ.
‘ದೂರಿನಲ್ಲಿ ಹೇಳಿದಂಥ ವಾತಾವರಣ ಕಾಲೇಜಿನಲ್ಲಿ ಇಲ್ಲ. ಆದರೂ, ಎಬಿವಿಪಿ ಅವರ ದೂರಿನಲ್ಲಿ ಕೆಲವು ಗಂಭೀರ ಅಂಶಗಳನ್ನು ಹೇಳಲಾಗಿದೆ. ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು’ ಎಂದರು.
‘ಮುಸ್ಲಿಂ ಪ್ರಾಧ್ಯಾಪಕರಿಂದ ನಮಾಜ್’
‘ಕಾನೂನು ಪದವಿಯ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ಸೇನೆಯ ಬಗೆಗೆ ಕೆಲವು ಪ್ರಾಧ್ಯಾಪಕರು ಧಾರ್ಮಿಕ ಮೂಲಭೂತವಾದ ಹಾಗೂ ನಕಾರಾತ್ಮಕ ವಿಚಾರಗಳನ್ನು ಹೇಳಿಕೊಡುತ್ತಿದ್ದಾರೆ’ ಎಂದು ಕಾಲೇಜಿನ ಎಬಿವಿಪಿ ಮುಖ್ಯಸ್ಥ ದಿಪೆಂದರ್ ಠಾಕೂರ್ ಅವರು ದೂರು ನೀಡಿದ್ದಾರೆ.
‘ಪ್ರಾಂಶುಪಾಲರು, ಮುಸ್ಲಿಂ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪ್ರತೀ ಶುಕ್ರವಾರ ಕಾಲೇಜಿನಲ್ಲಿ ನಮಾಜ್ ಮಾಡುತ್ತಾರೆ. ತರಗತಿಗಳನ್ನು ಮಾಡದೆ ಪ್ರಾಧ್ಯಾಪಕರು ನಮಾಜ್ ಮಾಡುತ್ತಾರೆ. ಜೊತೆಗೆ, ಕಾಲೇಜಿನಲ್ಲಿ ‘ಲವ್ ಜಿಹಾದ್’ ಹಾಗೂ ‘ಮಾಂಸಾಹಾರವಾದ’ವನ್ನು ಪ್ರಚಾರ ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.