ನವದೆಹಲಿ:ಯಂಗ್ ಇಂಡಿಯನ್ ಕಚೇರಿಗೆ ಇ.ಡಿ ಬೀಗ ಮುದ್ರೆ ಹಾಕಿದ ಬೆನ್ನಲ್ಲೇ ದೆಹಲಿ ಪೊಲೀಸರು ಎಐಸಿಸಿ ಕೇಂದ್ರ ಕಚೇರಿಗೆ ಸಂಪರ್ಕ ಬೆಸೆಯುವ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ.
ಎಐಸಿಸಿ ಕಚೇರಿ ಎದುರು ಪೊಲೀಸರನ್ನು ನಿಯೋಜಿಸಿರುವ ಹಾಗೂ ರಸ್ತೆ ಬಂದ್ ಮಾಡಿರುವ ದೃಶ್ಯವುಳ್ಳ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಪೊಲೀಸರು ಏಕೆ ಹೀಗೆ ಮಾಡಿದ್ದಾರೆ ಎಂಬುದೇ ನಿಗೂಢ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಪ್ರತಿಭಟನಕಾರರು ಎಐಸಿಸಿ ಕಚೇರಿ ಮುಂದೆ ಸೇರುವ ಬಗ್ಗೆ ಮಾಹಿತಿ ಲಭಿಸಿದೆ. ಹೀಗಾಗಿ ಮುಂಜಾಗ್ರತಾ ದೃಷ್ಟಿಯಿಂದ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಲಾಗಿದೆ’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.