ನವದೆಹಲಿ: ಜನಕೇಂದ್ರೀತ ವಾದ ಕಾನೂನು ವ್ಯವಸ್ಥೆಯನ್ನು ರೂಪಿಸಲು ಮತ್ತು ತ್ವರಿತ ನ್ಯಾಯದಾನಕ್ಕೆ ಪೂರಕವಾಗಿ ಕ್ರಿಮಿನಲ್ ಕಾಯ್ದೆಗಳಿಗೆ ತಿದ್ದುಪಡಿ ತರುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯೆ ದಂಡಸಂಹಿತೆ (ಸಿಆರ್ಪಿಸಿ), ಭಾರತೀಯ ಸಾಕ್ಷ್ಯಾಧಾರ ಕಾಯ್ದೆಗೆ ತಿದ್ದುಪಡಿ ತರಲು ಸಂಬಂಧಿತ ಭಾಗಿದಾರರ ಜೊತೆಗೆ ಚರ್ಚೆ ನಡೆದಿದೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಈ ಕುರಿತು ಲಿಖಿತ ಉತ್ತರ ನೀಡಿರುವ ಅವರು, ಸಲಹೆಗಳನ್ನು ನೀಡುವಂತೆ ಕೋರಿ ಕೋರಿ ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಲೆಫ್ಟಿನಂಟ್ ಗವರ್ನರ್ಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು, ಸುಪ್ರೀಂ ಕೋರ್ಟ್ನ ವಕೀಲರ ಸಂಘ, ವಿವಿಧ ರಾಜ್ಯಗಳ ವಕೀಲರ ಸಂಘಗಳಿಗೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.
ಅಲ್ಲದೆ, ಕ್ರಿಮಿನಲ್ ಕಾಯ್ದೆಗಳಲ್ಲಿ ಅಗತ್ಯ ಸುಧಾರಣೆ ಕುರಿತು ವರದಿ ನೀಡುವಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ನೇತೃತ್ವದಲ್ಲಿ ನಾಲ್ವರು ಸದಸ್ಯರಿರುವ ಸಮಿತಿಯನ್ನು 2020ರ ಮಾರ್ಚ್ 2ರಂದು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.