ಬೆಂಗಳೂರು: ಛತ್ತೀಸಗಡದ ನವ ರಾಯಪುರ ಸಾಯಿ ಸಂಜೀವನಿ ಆಸ್ಪತ್ರೆಯಲ್ಲಿ ಹೃದಯರೋಗ ಸಮಸ್ಯೆಯಿಂದ ಗುಣಮುಖರಾದ ಎರಡು ಸಾವಿರ ಮಕ್ಕಳು ಒಟ್ಟಿಗೆ ದೀಪ ಬೆಳಗಿಸುವ ಮೂಲಕ ಗಿನ್ನಿಸ್ ದಾಖಲೆ ಸೇರಿದ್ದಾರೆ.
ಅಲ್ಲಿನ ಶ್ರೀ ಸತ್ಯಸಾಯಿ ಸಂಜೀವನಿ ಮಕ್ಕಳ ಹೃದಯ ಚಿಕಿತ್ಸಾ ಹಾಗೂ ವಿಶೇಷ ಆರೈಕೆ ಕೇಂದ್ರ, ಭಾರತದ ಮೊದಲ ಚಾರಿಟೆಬಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಸಾವಿರಾರು ಮಕ್ಕಳಿಗೆ ಪುನರ್ ಜನ್ಮ ನೀಡಿದ ಕೀರ್ತಿ ಈ ಆಸ್ಪತ್ರೆಗೆ ಸಲ್ಲುತ್ತದೆ. ನ. 20ರಂದು ಆಸ್ಪತ್ರೆಯ 10ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಈ ಸಮಯದಲ್ಲಿ ಗುಣ ಮುಖರಾದ ಮಕ್ಕಳು ಒಟ್ಟಿಗೆ ದೀಪ ಬೆಳಗಿದರು. ಎಲ್ಲ ಮಕ್ಕಳು ಬಡತನದ ಹಿನ್ನೆಲೆಯ ಕುಟುಂಬದಿಂದ ಬಂದವರು. ಹುಟ್ಟಿದಾಗಲೇ ಹೃದಯ ಸಮಸ್ಯೆಗೆ ಒಳ ಗಾದವರು. ಅವರಿಗೆಸಂಕೀರ್ಣ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಗಳನ್ನೂ ಸಂಪೂರ್ಣ ಉಚಿತವಾಗಿ ನೀಡಲಾಗಿದೆ ಎಂದುಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಶ್ರೀನಿವಾಸ್ ಮಾಹಿತಿ ನೀಡಿದರು.
‘ನಾವು ಪ್ರಪಂಚದ ಮಕ್ಕಳ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ. ದೀಪಗಳ ಬೆಳಗುವಿಕೆ ಪ್ರೀತಿಯ ಶಕ್ತಿಯ ಸಂಕೇತ. ಆಧುನಿಕ ಉಪಕರಣಗಳನ್ನು ಒಳಗೊಂಡ ಸತ್ಯಸಾಯಿ ಸಂಜೀವನಿ ಆಸ್ಪತ್ರೆ ನಿಸ್ವಾರ್ಥ ಸೇವೆಗೆ ಹೆಸರಾಗಿದೆ.ಜಾತಿ-ಮತದ ಭೇದವಿಲ್ಲದೆ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಇದುವರೆಗೂ 23 ಸಾವಿರ ಜನರು ಸೌಲಭ್ಯ ಪಡೆದಿದ್ದಾರೆ’ ಎಂದರು.
ಸೇನೆಯ ಪ್ರತಿನಿಧಿಗಳು, ಅರೆಸೇನಾ ಪಡೆಗಳು, ರಾಜ್ಯ ಪೊಲೀಸ್, ಎನ್ಸಿಸಿ, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಮಕ್ಕಳು ಸಂಭ್ರಮಕ್ಕೆ ಸಾಕ್ಷಿಯಾದರು.