ಲಖನೌ: ನಗರದಲ್ಲಿ ಮಂಗಳವಾರ ಐದು ಅಂತಸ್ತಿನ ವಸತಿ ಸಮುಚ್ಚಯ ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟು 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್ಪಿ) ಶಾಸಕರೊಬ್ಬರ ಮಗನನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿತೋರೆ ಕ್ಷೇತ್ರದ ಶಾಹಿದ್ ಮನ್ಝೂರ್ ಅವರ ಮಗ ನವಾಜಿಶ್ ಶಾಹಿದ್ ಬಂಧಿತ. ಆತನನ್ನು ಮೀರಠ್ನಲ್ಲಿ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಹಜ್ರತ್ಗಂಜ್ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್ಐಆರ್ ದಾಖಲಿಸಲಾಗಿದೆ. ಮೊಹಮ್ಮದ್ ತಾರಿಕ್ ಮತ್ತು ಫಹಾದ್ ಯಾಝ್ದಾನಿ ಎಂಬ ಇನ್ನೂ ಇಬ್ಬರ ಹೆಸರು ಎಫ್ಐಆರ್ನಲ್ಲಿ ನಮೂದಾಗಿದೆ. ಕಟ್ಟಡ ನಿರ್ಮಿಸಲಾಗಿದ್ದ ಭೂಮಿಯು ಶಾಹಿದ್ ಮಾಲಿಕತ್ವದಲ್ಲಿದೆ. ‘ಯಾಝ್ದಾನಿ ಬಿಲ್ಡರ್ಸ್’ ಈ ಕಟ್ಟಡವನ್ನು ನಿರ್ಮಿಸಿದ್ದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಇಚ್ಛೆಯಿಂದ ನೋವುಂಟು ಮಾಡುವುದು), 308 (ಕೊಲೆ ಯತ್ನ), 420 (ವಂಚನೆ) ಮತ್ತು 120ಬಿ (ಕ್ರಿಮಿನಲ್ ಸಂಚು) ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯ ಸೆಕ್ಷನ್ 7ರ ಅಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ವಕ್ತಾರ ಅಬ್ಬಾಸ್ ಹೈದರ್ ಅವರ ತಾಯಿ ಮತ್ತು ಮಡದಿ ಮೃತಪಟ್ಟವರು. ಇನ್ನೂ ಇಬ್ಬರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ಇದೆ.