ನವದೆಹಲಿ: ಎಲ್ಗಾರ್ ಪರಿಷತ್– ಮಾವೊ ಸಂಪರ್ಕ ಪ್ರಕರಣದಲ್ಲಿ ಚಿಂತಕ, ಸಾಮಾಜಿಕ ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು, ‘ತೇಲ್ತುಂಬ್ಡೆ ಅವರಿಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ’ ಎಂದು ಹೇಳಿದೆ.
‘ಈ ಅರ್ಜಿಯನ್ನಷ್ಟೇ ವಜಾಗೊಳಿಸಲಾಗಿದೆ. ಆದರೆ ಹೈಕೋರ್ಟ್ನ ತೀರ್ಪಿನಲ್ಲಿ ತಿಳಿಸಲಾದ ಮಾಹಿತಿಯು ವಿಚಾರಣೆ ವೇಳೆಯಲ್ಲಿನ ಅಂತಿಮ ತೀರ್ಮಾನವೆಂಬಂತೆ ಪರಿಗಣಿಸಬೇಕಾಗಿಲ್ಲ’ ಎಂದು ಪೀಠ ಹೇಳಿತು.
ಇದೇ 18ರಂದು ಬಾಂಬೆ ಹೈಕೋರ್ಟ್ ತೇಲ್ತುಂಬ್ಡೆ ಅವರಿಗೆ ಜಾಮೀನು ಮಂಜೂರು ಮಾಡಿತ್ತು.