ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸದ ವ್ಯಾಪಾರಿಗಳನ್ನು ಥಳಿಸಿ, ಮುಖದ ಮೇಲೆ ಮೂತ್ರ ಮಾಡಿದ ಪೊಲೀಸರು!

Last Updated 17 ಮಾರ್ಚ್ 2023, 7:50 IST
ಅಕ್ಷರ ಗಾತ್ರ

ನವದೆಹಲಿ: ಮೂವರು ಪೊಲೀಸರು ಸೇರಿದಂತೆ 7 ಮಂದಿ, ಇಬ್ಬರು ಮಾಂಸದ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ, ಲೂಟಿ ಮಾಡಿರುವ ಘಟನೆ ಪೂರ್ವ ದೆಹಲಿಯ ಆನಂದ್ ವಿಹಾರ್‌ನಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಾರ್ಚ್ 7ರಂದು ಈ ಘಟನೆ ನಡೆದಿದ್ದು, ತಡವಾಗಿ ಬಯಲಾಗಿದೆ.

ಮಾಂಸ ಮಾರಾಟಗಾರರು ಸಂಚರಿಸುತ್ತಿದ್ದ ಕಾರು ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಗಲಭೆ ಸಂಭವಿಸಿದೆ. ಆರೋಪಿಗಳಲ್ಲಿ ಒಬ್ಬ ‘ಗೋ ರಕ್ಷಕ’ನಾಗಿದ್ದು, ಮಾಂಸ ಮಾರಾಟಗಾರರ ಮುಖದ ಮೇಲೆ ಮೂತ್ರ ಮಾಡಿದ್ದಾನೆ. ಅಲ್ಲದೆ, ಅವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರು ಕೂಡಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಸಹ 4 ದಿನಗಳ ಬಳಿಕ ಪ್ರಕರಣ ದಾಖಲಾಗಿದೆ.

ಮೂವರು ಪೊಲೀಸರು ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಲ್ಲಿ ಒಬ್ಬ ಎಎಸ್ಐ ಆಗಿದ್ದು, ಆತನನ್ನು ಅಮಾನತು ಮಾಡಲಾಗಿದೆ.

ಮುಸ್ತಾಫಾಬಾದ್‌ನ ನಿವಾಸಿಯಾಗಿರುವ ನವಾಬ್, ಗಾಜಿಪುರಕ್ಕೆ ಮಾಂಸ ಸರಬರಾಜು ಮಾಡುತ್ತಿದ್ದರು. ಸೋದರ ಸಂಬಂಧಿ ಶೋಯಬ್ ಜೊತೆ ಕಾರಿನಲ್ಲಿ ಮಾಂಸ ಇಟ್ಟುಕೊಂಡು ಮನೆಯತ್ತ ತೆರಳುತ್ತಿದ್ದರು. ಈ ಸಂದರ್ಭ, ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಚಾಲಕ ಮಾಂಸದ ವ್ಯಾಪಾರಿಗಳಿಂದ ₹4,000 ಡ್ಯಾಮೇಜ್ ಪರಿಹಾರವಾಗಿ ನೀಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ, ಸ್ಥಳಕ್ಕಾಗಮಿಸಿದ ಪೊಲೀಸರು ಮಾಂಸ ಮಾರಾಟಗಾರರಿಂದ ₹2,500 ಪಡೆದು ಸ್ಕೂಟರ್ ಚಾಲಕನಿಗೆ ನೀಡಿದ್ದಾರೆ. ಬಳಿಕ, ಪೊಲೀಸರು ಮಾಂಸದ ವ್ಯಾಪಾರಿಗಳಿಂದ 15 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಪೊಲೀಸ್ ಠಾಣೆಗೆ ಕೊಂಡೊಯ್ಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.

ಇದಕ್ಕೆ ಮಾಂಸದ ವ್ಯಾಪಾರಿಗಳು ನಿರಾಕರಿಸಿದಾಗ , ಇನ್ನೂ ನಾಲ್ವರನ್ನು ಕರೆಸಿಕೊಂಡ ಪೊಲೀಸರು, ಮಾಂಸದ ವ್ಯಾಪಾರಿಗಳನ್ನು ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಈ ಸಂದರ್ಭ ನವಾಬ್ ಮತ್ತು ಶೋಯಬ್ ಅವರಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ, ಆರೋಪಿಯೊಬ್ಬ ಅವರ ಮೇಲೆ ಮೂತ್ರ ಮಾಡಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿ ತಿಳಿಸಿದೆ.

ಅಲ್ಲದೆ, ಅವರನ್ನು ಗೋಹತ್ಯೆ ಮಾಡುವವರು ಎಂದು ಆರೋಪಿಸಿರುವ ಪೊಲೀಸರು, ₹25,000 ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತರಿಗೆ ಪ್ರಜ್ಞೆ ತಪ್ಪುವ ಚುಚ್ಚುಮದ್ದನ್ನು ಚುಚ್ಚಿ, ಖಾಲಿ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತರು ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT