ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್ ಕಚೇರಿಯಲ್ಲಿ ಉಗ್ರನೊಬ್ಬನಿಂದ ಹತ್ಯೆಗೊಳಗಾದ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಅವರ ಕುಟುಂಬಕ್ಕೆ ₹ 5 ಲಕ್ಷ ನೆರವು ಮತ್ತು ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿಯನ್ನು ಅಲ್ಲಿನ ಜಿಲ್ಲಾಡಳಿತ ನೀಡಿದೆ.
ಭಟ್ ಪತ್ನಿ ಮೀನಾಕ್ಷಿ ರೈನಾ ಅವರಿಗೆ ಜಮ್ಮುವಿನ ನೋವಬಾದ್ನ ಸರ್ಕಾರಿ ಶಾಲೆಯಲ್ಲಿ ನೌಕರಿಯನ್ನು ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಮ್ಮು ಡಿವಿಷನಲ್ ಕಮಿಷನರ್ ರಮೇಶ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ಅವರು ಹಣಕಾಸು ನೆರವಿನ ಚೆಕ್ ಮತ್ತು ನೌಕರಿಯ ನೇಮಕಾತಿ ಪತ್ರವನ್ನು ನೀಡಿದ್ದಾರೆ.
ಚದೂರ ಪಟ್ಟಣದ ತಹಶೀಲ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ರಾಹುಲ್ ಭಟ್ ಮೇಲೆ ಉಗ್ರನೊಬ್ಬ ಗುಂಡು ಹಾರಿಸಿ ಹತ್ಯೆಗೈದಿದ್ದ.