ಅಯೋಧ್ಯೆ (ಉತ್ತರ ಪ್ರದೇಶ): ‘ಕರಸೇವಕರಿಗೆ ಗುಂಡಿಕ್ಕಲು ಸಮಾಜವಾದಿ ಪಕ್ಷದ ಸರ್ಕಾರವು ಆದೇಶಿಸಿತ್ತು. ರಾಮನನ್ನು ಹಲವು ವರ್ಷಗಳ ಕಾಲ ಟೆಂಟ್ನಲ್ಲಿ ಇರುವಂತೆ ಮಾಡಲಾಗಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ಕರಸೇವಕರಿಗೆ ಗುಂಡಿಕ್ಕಲಾ ಗಿತ್ತು. ಅವರ ಶವಗಳನ್ನು ಸರಯೂ ನದಿಯಲ್ಲಿ ಬಿಸಾಡಲಾಗಿತ್ತು. ಇದು ನಿಮಗೆ ನೆನಪಿದೆಯೇ? ಎಸ್ಪಿ ಮತ್ತು ಬಿಎಸ್ಪಿ ಆಡಳಿತದಲ್ಲಿ ಜನರ ನಂಬಿಕೆಯನ್ನು ಗೌರವಿಸುವ ಪರಿಪಾಠವೇ ಇರಲಿಲ್ಲ’ ಎಂದು ಅವರು ಹರಿಹಾಯ್ದಿದ್ದಾರೆ.
‘ಅಖಿಲೇಶ್ ಯಾದವ್ ಅವರು ಮತ ಕೇಳಲು ಇಲ್ಲಿಗೆ ಬರುತ್ತಾರೆ. ಆಗ, ಕರಸೇವಕರು ಏನು ಅನ್ಯಾಯ ಮಾಡಿದ್ದರೆಂದು ಅವರನ್ನು ಗುಂಡಿಟ್ಟು ಕೊಂದಿರಿ ಎಂದು ಪ್ರಶ್ನಿಸಿ’ ಎಂದು ಶಾ ಕರೆ ನೀಡಿದ್ದಾರೆ.
‘ರಾಮ ಮಂದಿರ ನಿರ್ಮಾಣವನ್ನು ತಡೆಯಲು ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ತಡೆ ಒಡ್ಡುತ್ತಲೇ ಇದ್ದವು. ಹೀಗಾಗಿಯೇ ರಾಮಲಲ್ಲಾ ದಶಕಗಳ ಕಾಲ ಟೆಂಟ್ನಲ್ಲಿಯೇ ಕಳೆಯಬೇಕಾಯಿತು. ಈಗ ಅದನ್ನು ತಡೆಯಲು ಯಾರಾದರೂ ಬಯಸಿದರೆ, ತಡೆಯಲು ಯತ್ನಿಸಲಿ’ ಎಂದು ಅವರು ಸವಾಲು ಹಾಕಿದ್ದಾರೆ.