ಹೊಸಪೇಟೆ (ವಿಜಯನಗರ): ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಇಲ್ಲಿನ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಹಾಕಲಾಗಿದ್ದ ಸ್ವಾಗತ ಕಮಾನು, ಫ್ಲೆಕ್ಸ್ಗಳು ನೆಲಕ್ಕುರುಳಿ ಬಿದ್ದಿವೆ.
ಸಭಾ ಮಂಟಪದ ಮುಂಭಾಗ ಮಂಟಪದ ಮಾದರಿಯಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ಬಿರುಗಾಳಿಗೆ ಅದು ಸಂಪೂರ್ಣ ನೆಲಕ್ಕುರುಳಿದೆ. ಕಲ್ಲಿನ ರಥದ ಪ್ರತಿಕೃತಿಯಷ್ಟೇ ಉಳಿದುಕೊಂಡಿದೆ. ಇನ್ನು, ವರ್ತುಲ ರಸ್ತೆಯುದ್ದಕ್ಕೂ ಹಾಕಿದ್ದ ಸ್ವಾಗತ ಕಮಾನು, ಫ್ಲೆಕ್ಸ್ಗಳು ಬಿದ್ದಿವೆ. ಬ್ಯಾನರ್ಗಳು ಹರಿದು ಹೋಗಿವೆ.
ಸ್ವಾಗತ ಕಮಾನುಗಳು ರಸ್ತೆಯ ಮಧ್ಯದಲ್ಲಿಯೇ ಬಿದ್ದದ್ದರಿಂದ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿ, ದಟ್ಟಣೆಯಾಗಿತ್ತು. ಬಳಿಕ ಕ್ರೇನ್ ಮೂಲಕ ತೆರವುಗೊಳಿಸಲಾಯಿತು. ಜಿಲ್ಲೆಯ ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲಿ ಮಳೆಯಾಗಿರುವುದು ವರದಿಯಾಗಿದೆ.